ಕೊಳ್ಳೇಗಾಲ: ‘ಮಹಿಳೆಯರು ಮಾತನ್ನು ಮತವಾಗಿ ಬದಲಿಸಿ ಬಿಎಸ್ಪಿಗೆ ನೀಡಿದಾಗ ಯಾವ ಪಕ್ಷಗಳು ಬಂದು ಸೆಣಸಿದರೂ ನನ್ನ ಗೆಲುವು ಖಚಿತ’ ಎಂದು ಬಿಎಸ್ಪಿ ರಾಜ್ಯ ಘಟಕದ ಅಧ್ಯಕ್ಷ ಎನ್.ಮಹೇಶ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಬಿಎಸ್ಪಿ ಮಹಿಳಾ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಿಳೆಯರ ಸಬಲೀಕರಣ ಆದಾಗ ನಮ್ಮ ದೇಶ ಉದ್ಧಾರವಾಗು ತ್ತದೆ. ಸಾಮಾಜದಲ್ಲಿ ಹೆಣ್ಣಿಗೆ ಪ್ರಮುಖ ಸ್ಥಾನವಿದೆ. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂದ ಅವರು, ಕಳೆದ 20 ವರ್ಷಗಳಿಂದ ಚುನಾವಣೆಗಳಲ್ಲಿ ಸ್ಪರ್ಧಿಸಿ ಸತತ ಸೋಲು ಕಂಡಿದ್ದೇನೆ. ನನ್ನನು ಮತ್ತೆ ಸೋಲಿಸಿ ಸಾಯಿಸಬೇಡಿ ನಾನು ಗೆದ್ದರೆ ಕ್ಷೇತ್ರದ ಅಭಿವೃದ್ಧಿಗೆ ಕಂಕಣಬದ್ಧನಾಗಿ ದುಡಿಯುತ್ತೇನೆ. ಒಂದೇ ಒಂದು ಬಾರಿ ನನ್ನನು ಗೆಲ್ಲಿಸಿ’ ಎಂದು ಮನವಿ ಮಾಡಿದರು
‘ಕೆಲವರು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಕೆಲ ಕಿಡಿಗೇಡಿಗಳು ನನ್ನ ವಿರುದ್ಧ ಜಾತಿವಾದಿ ಎಂದು ಹಣೆಪಟ್ಟಿ ಕಟ್ಟುವುದಕ್ಕೆ ಹಾಗೂ ಗೆದ್ದರೆ ಗೂಂಡಾಗಿರಿ ಹೆಚ್ಚುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಜಾತಿವಾದಿಯಲ್ಲ. ಅಪ್ಪಟ ಮಾನವತಾ ವಾದಿ, ಗೂಂಡಾಗಿರಿಯನ್ನು ನಿರ್ನಾಮ ಮಾಡು ವುದೇ ನನ್ನ ಗುರಿ’ ಎಂದರು.
ಇದೇ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿಯ 30 ಕ್ಕೂ ಹೆಚ್ಚು ಮಹಿಳಾ ಕಾರ್ಯಕರ್ತರು ಬಿಎಸ್ಪಿಗೆ ಸೇರ್ಪಡೆಯಾದರು.
ಬಿಎಸ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಬಾಗಳಿ ರೇವಣ್ಣ, ನಗರಸಭೆ ಸದಸ್ಯೆ ನಾಗಸುಂದ್ರಮ್ಮ, ಮಹಿಳಾ ಮುಖಂ ಡರಾದ ಅಮೃತಾ, ಅನ್ನಪೂರ್ಣ, ಧರಣಿ ನಾಗರಾಜು, ಸರಸ್ವತಿ, ಶೋಭಾ, ಸುಧಾಶಿವಮಲ್ಲು, ಚಂದ್ರಮ್ಮ ಇದ್ದರು.