ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆನ್ಸಿಲ್‌ಗೆ ಹೇಳಿದ ಬುದ್ಧಿವಾದ

Last Updated 16 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಹಲವಾರು ವರ್ಷಗಳಿಂದ ಪೆನ್ಸಿಲ್‌ಗಳನ್ನು ತಯಾರಿಸುತ್ತಿದ್ದ ವೃದ್ಧನೊಬ್ಬ ತಾನು ಹೊಸದಾಗಿ ತಯಾರಿಸಿದ ಪೆನ್ಸಿಲ್‌ಗಳನ್ನು ಪೊಟ್ಟಣಗಳಲ್ಲಿ ಇರಿಸಿ ಮಾರಾಟಕ್ಕೆ ಕಳುಹಿಸುವ ಮೊದಲು ತಾನು ಆಗ ತಾನೇ ತಯಾರಿಸಿದ ಪೆನ್ಸಿಲ್ ಒಂದನ್ನು ಕೈಯಲ್ಲಿ ಹಿಡಿದು ಹೀಗೆನ್ನುತ್ತಿದ್ದ. ‘ಮಗುವೇ, ನೀನು ನನ್ನನು ಅಗಲಿ ಹೋಗುವ ಮೊದಲು ನೀನು ತಿಳಿದುಕೊಳ್ಳಬೇಕಾಗಿರುವ ಐದು ವಿಷಯಗಳಿವೆ. ಈ ವಿಷಯಗಳನ್ನು ನೀನು ಗಮನವಿಟ್ಟು ಆಲಿಸಿ, ಅವುಗಳನ್ನು ಮರೆಯದೆ ಪಾಲಿಸಿದರೆ ನೀನು ಅತ್ಯುತ್ತಮ ಪೆನ್ಸಿಲ್ ಆಗಲು ಸಾಧ್ಯ’.

ಮೊದಲನೇ ವಿಷಯ, ನೀನು ನಿನ್ನನ್ನೇ ಪರರ ಕೈಗೆ ಕೊಟ್ಟರೆ ಮಾತ್ರ, ನಿನ್ನಿಂದ ಅತ್ಯದ್ಭುತ ಕಾರ್ಯಗಳನ್ನು ಮಾಡಲು ಸಾಧ್ಯ. ಎರಡನೆಯದು, ಕಾಲಕಾಲಕ್ಕೆ ನಿನ್ನನ್ನೇ ಮೊನಚುಗೊಳಿಸುವಾಗ ನಿನಗೆ ಬಹಳ ನೋವಾಗುವುದು. ಆದರೆ ಈ ನೋವಿನಿಂದ ಮಾತ್ರ ನೀನು ಒಳ್ಳೆಯ ಉಪಯುಕ್ತ ಪೆನ್ಸಿಲ್ ಆಗಲು ಸಾಧ್ಯ. ಮೂರನೆಯದು, ನೀನು ಆಗಾಗ ಮಾಡುವ ಸಣ್ಣ ಪುಟ್ಟ ತಪ್ಪುಗಳನ್ನು ಅಳಿಸಲು ನಿನಗೆ ಸಾಧ್ಯವಾಗುವುದು. ನಾಲ್ಕನೆಯದು, ನಿನ್ನ ಅತ್ಯಂತ ಅಮೂಲ್ಯವಾದ ಭಾಗ ಹೊರ ಮೇಲ್ಮೈಯಲ್ಲಿಲ್ಲ, ಒಳಗೆ ಅಡಗಿದೆ. ಬಹಳ ಮುಖ್ಯವಾದ ಐದನೆಯ ವಿಷಯ, ಯಾವುದೇ ಮೇಲ್ಮೈಯಲ್ಲಿ ನೀನು ಬರೆದರೂ ಅದರ ಮೇಲೆ ನಿನ್ನ ಅಸ್ತಿತ್ವದ ಕುರುಹನ್ನು ನೀನು ಉಳಿಸಬೇಕು. ಏನಾದರೂ ಸಂಭವಿಸಲಿ, ನೀನು ಬರೆಯುತ್ತಾ ಇರಬೇಕು. ತನ್ನ ಒಡೆಯನ ಬುದ್ಧಿವಾದಕ್ಕೆ ಪೆನ್ಸಿಲ್ ಮೌನವಾಗಿ ಸಮ್ಮತಿ ಸೂಚಿಸಿತು.

ಪೆನ್ಸಿಲ್ ತಯಾರಕನು ತಾನು ತಯಾರಿಸಿದ ಪೆನ್ಸಿಲ್‌ಗೆ ಹೇಳಿದ ಬುದ್ಧಿವಾದ, ನಮ್ಮನ್ನು ಸೃಷ್ಟಿಸಿದ ದೇವರು ನಮಗೆ ನೀಡಿದ ಮಾರ್ಗದರ್ಶಿಯಾಗಿದೆ. ಈ ಲೋಕದಲ್ಲಿ ಹುಟ್ಟಿದ ಪ್ರತಿಯೊಬ್ಬ ತನ್ನ ತಂದೆ-ತಾಯಿಗಳು, ಗುರುಹಿರಿಯರಿಂದ ಶಿಕ್ಷಿತನಾಗಿ, ಅವರ ಮಾರ್ಗದರ್ಶನವನ್ನು ಪಡೆದುಕೊಂಡು ಈ ಲೋಕಕ್ಕೆ ಉಪಯುಕ್ತವಾಗುತ್ತಾನೆ. ಜೀವನದ ಹಾದಿಯಲ್ಲಿ ಆಗಾಗ ಎಡವಿ ತಪ್ಪುಮಾಡಿದರೂ, ಮತ್ತೆ ಎದ್ದು ಮುನ್ನಡೆಯಬೇಕು. ಬಾಹ್ಯ ವಿಚಾರಗಳಿಗೆ ಹೆಚ್ಚು ಗಮನವೀಯದ ಜೀವನದಲ್ಲಿ ಅಮೂಲ್ಯವಾದ ಆಂತರಿಕ ಬೆಳವಣಿಗೆಗೆ ಗಮನವೀಯಬೇಕು. ಕೊನೆಗೆ, ಈ ಲೋಕದ ಜೀವನವನ್ನು ಮುಗಿಸಿ ತೆರಳುವಾಗ, ಮಾಡಿದ ಒಳಿತಿನ ಕುರುಹನ್ನು ಇಲ್ಲಿ ಉಳಿಸಬೇಕು. ಇದರಿಂದ ಈ ಲೋಕದ ಜನರು ತಲೆತಲಾಂತರದವರೆಗೆ ಅವರನ್ನು ಸ್ಮರಿಸಬೇಕು. ಇದಕ್ಕಾಗಿ ಈ ಲೋಕದ ಜೀವನವನ್ನು ಫಲಪ್ರದವಾಗಿ ಜೀವಿಸುವ ಜವಾಬ್ದಾರಿ ಪ್ರತಿಯೊಬ್ಬ ಮಾನವನಿಗೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT