ಬೆಂಗಳೂರು: ಮನೆಯ ಬಳಿ ಆಟವಾಡುತ್ತಿದ್ದ ಮಗುವೊಂದು ಬಲೂನಿನ ಚೂರು ನುಂಗಿ ಮೃತಪಟ್ಟಿರುವ ಘಟನೆ ಹುಳಿಮಾವು ಬಳಿಯ ಕಮ್ಮನಹಳ್ಳಿಯಲ್ಲಿ ಸೋಮವಾರ ನಡೆದಿದೆ.
ಎರಡು ವರ್ಷದ ನವಾಜ್ ಮೃತಪಟ್ಟಿರುವ ರ್ದುದೈವಿ ಮಗು. ಬೆಳಿಗ್ಗೆ ಆಟವಾಡುತ್ತಿದ್ದ ನವಾಜ್ ಬಲೂನಿನ ಚೂರು ನುಂಗಿದ್ದಾನೆ. ಮಗು ಉಸಿರಾಟದ ತೊಂದರೆ ಎದುರಿಸುತ್ತಿರುವುದನ್ನು ನೋಡಿದ ಪೋಷಕರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದ್ದರಿಂದ ಪಾಲಕರು ಮಗುವನ್ನು ಅಪೋಲೊ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಲೂನಿನ ಚೂರು ಶ್ವಾಸಕೋಸದಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಮಗು ಮೃತಪಟ್ಟಿರುವುದಾಗಿ ಅಲ್ಲಿಯ ವೈದ್ಯರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.