ಚಾಮರಾಜನಗರ: ನಗರದಲ್ಲಿ ಹಲಸಿನ ಘಮಲು ಮತ್ತೆ ಸೂಸುತ್ತಿದೆ. ಇದುವರೆಗೂ ಅಲ್ಲೊಂದು ಇಲ್ಲೊಂದರಂತೆ ಹಲಸಿನ ಹಣ್ಣು ಮಾರಾಟವಾಗುತ್ತಿತ್ತು. ಈಗ ನಗರಕ್ಕೆ ಹೆಚ್ಚಾಗಿ ಹಲಸಿನ ಹಣ್ಣು ಆವಕವಾಗಿದ್ದು, ಹಲಸು ಪ್ರಿಯರನ್ನು ಸೆಳೆಯುತ್ತಿದೆ.
ಮುಖ್ಯವಾಗಿ ಸಂತೇಮರಹಳ್ಳಿ ರಸ್ತೆಯ ದೊಡ್ಡರಾಯನಪೇಟೆ ಅಡ್ಡರಸ್ತೆ ಬದಿಯಲ್ಲಿ ಹೆಚ್ಚಾಗಿ ಹಲಸು ಹಣ್ಣಿನ ವ್ಯಾಪಾರ ಆರಂಭವಾಗಿದೆ. ರುಚಿಕರವಾದ ಹಲಸಿನ ಹಣ್ಣುಗಳ ಸುವಾಸನೆ ಬಾಯಲ್ಲಿ ನೀರೂರಿಸುತ್ತಿವೆ.
ಇದಲ್ಲದೇ ಹಲಸಿನ ಹಣ್ಣುಗಳು ಜೆಎಸ್ಎಸ್ ಕಾಲೇಜು ಬಳಿಯೂ ಮಾರಾಟವಾಗುತ್ತಿದೆ. ಚಂದಕವಾಡಿ, ಆಲೂರು ಬಳಿಯೂ ಮಾರಾಟ ಕಳೆಗಟ್ಟಿದೆ. ಗುಣಮಟ್ಟ, ಗಾತ್ರಕ್ಕೆ ತಕ್ಕಂತೆ ಬೆಲೆ ನಿಗದಿಯಾಗಿದೆ.
ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಹಲಸಿನಮರ ಇಳುವರಿ ಕೊಡುತ್ತದೆ. ಚಾಮರಾಜನಗರ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಬಿಡಿಬಿಡಿಯಾಗಿ ಬೆಳೆದಿರುವ ಮರಗಳಿಂದ ಹಣ್ಣುಗಳನ್ನು ವ್ಯಾಪಾರಸ್ಥರು ಕೊಂಡು ತಂದು ಇಲ್ಲಿ ಮಾರಾಟ ಮಾಡುತ್ತಾರೆ. ಎಪಿಎಂಸಿ ಹಾಗೂ ಕೆಲವೆಡೆ ಮದ್ಯವರ್ತಿಗಳು ರೈತರಿಂದ ಸಗಟಾಗಿ ಹಣ್ಣುಗಳನ್ನು ಖರೀದಿಸಿ ತಂದು ವ್ಯಾಪಾರಸ್ಥರಿಗೆ ನೀಡುತ್ತಾರೆ.
ತರಕಾರಿ ಬೆಲೆ ಸ್ಥಿರ: ಕಳೆದ ವಾರದ ಧಾರಣೆಯಲ್ಲೇ ಬಹುತೇಕ ಎಲ್ಲ ತರಕಾರಿಗಳು ಮಾರಾಟವಾಗುತ್ತಿದೆ. ಟೊಮೆಟೊ ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 12ರಲ್ಲಿ ಇದೆ. ಬೀನ್ಸ್ ದರ ₹ 40 ಆಗಿದೆ. ಕ್ಯಾರೇಟ್ ₹ 20, ಬೆಂಡೆ ₹ 40 ಆಗಿದೆ.
ಮೊಟ್ಟೆ ದರ ಚೇತರಿಕೆ: ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಈ ವಾರ ಚೇತರಿಕೆ ಕಂಡಿದೆ. ಕಳೆದ ವಾರ ಒಂದು ಮೊಟ್ಟೆಗೆ ₹ 3.38 ಸಗಟು ಧಾರಣೆ ಇತ್ತು. ಇದು ಈಗ ₹ 3.64ಕ್ಕೆ ಹೆಚ್ಚಿದೆ.
ಕರ್ನಾಟಕ ಪೌಲ್ಟ್ರಿ ಫಾರ್ಮಸ್ ಮತ್ತು ಬ್ರೀಡರ್ಸ್ ಅಸೋಸಿಯೇಷನ್ ದರವು ಬ್ರಾಯ್ಲರ್ ಕೋಳಿ ಕೆ.ಜಿಗೆ ₹ 83 ಹಾಗೂ ಬ್ರಾಯ್ಲರ್ ಪ್ರೇರೇಂಟ್ ಕೋಳಿ ದರ ಕೆ.ಜಿಗೆ ₹ 72 ಇತ್ತು. ಇದು ಈಗ ಕ್ರಮವಾಗಿ ₹ 86 ಹಾಗೂ ₹ 67 ಆಗಿದೆ.
ಇಳಿಕೆ ಕಾಣದ ಮಾವಿನಕಾಯಿ ದರ
ಮಾವಿನ ಕಾಯಿ ಮಾರುಕಟ್ಟೆಗೆ ಬಂದು ಒಂದು ತಿಂಗಳಾದರೂ ಅದರ ದರದಲ್ಲಿ ವ್ಯತ್ಯಾಸ ಆಗಿಲ್ಲ. ದೊಡ್ಡ ಗಾತ್ರದ ಕಾಯಿಗೆ ₹ 30 ಇದೆ. ಬೇಸಿಗೆಯ ಮಧ್ಯಭಾಗದಲ್ಲಿ ಬೆಲೆ ಇಳಿಯಬಹುದು ಎಂಬ ಗ್ರಾಹಕರ ಲೆಕ್ಕಾಚಾರ ಕೈಗೂಡಿಲ್ಲ.