ಕಠ್ಮಂಡು: ನೇಪಾಳದ ಬಿರಾತ್ನಗರ ಪ್ರದೇಶದಲ್ಲಿರುವ ಭಾರತ ರಾಯಭಾರ ಕಚೇರಿ ಸಮೀಪ ಬಾಂಬ್ ಸ್ಫೋಟಗೊಂಡಿದ್ದು, ಕಚೇರಿ ಆವರಣದಲ್ಲಿರುವ ಕಾಂಪೌಂಡ್ಗೆ ಹಾನಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಮೋರಾಂಗ್ ಜಿಲ್ಲಾ ಎಸ್ಪಿ ಅರುಣ್ಕುಮಾರ್ ಬಿ.ಸಿ ಅವರು, ‘ಕಚೇರಿಯ ಹಿಂದೆ ಇರುವ ಖಾಲಿ ಜಾಗದಲ್ಲಿ ಸೋಮವಾರ ರಾತ್ರಿ ಸ್ಫೋಟ ಸಂಭವಿಸಿದ್ದು, ಕಾಂಪೌಂಡ್ಗೆ ಸಣ್ಣ ಪ್ರಮಾಣದ ಹಾನಿಯಾಗಿದೆ’ ಎಂದಿದ್ದಾರೆ.
ರಾತ್ರಿ 8.20ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಈ ವೇಳೆ ಕಚೇರಿಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಘಟನೆ ಬಳಿಕ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಕೃತ್ಯಕ್ಕೆ ಸ್ಥಳೀಯ ರಾಜಕೀಯ ಗುಂಪು ಕಾರಣವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಸೋಮವಾರ ಸ್ಥಳೀಯ ರಾಜಕೀಯ ಪಕ್ಷವೊಂದು ಬಿರಾತ್ನಗರ ಬಂದ್ಗೆ ಕರೆ ನೀಡಿತ್ತು.
ನೇಪಾಳದಲ್ಲಿ ನಿರಂತರವಾಗಿ ಪ್ರವಾಹ ಮತ್ತು ಭೂಕುಸಿತ ಸಂಭವಿಸುತ್ತಿದ್ದ ಕಾರಣ ಭಾರತದ ರಾಯಭಾರ ಕಚೇರಿಯನ್ನು ಬಿರಾತ್ನಗರಕ್ಕೆ ಸ್ಥಳಾಂತರಿಸಲಾಗಿದೆ. ಇದು ನೇಪಾಳದ ಪ್ರಮುಖ ಕೈಗಾರಿಕಾ ಪ್ರದೇಶವಾಗಿದ್ದು, ಬಿಹಾರದ ಉತ್ತರ ಗಡಿಯಿಂದ ಕೇವಲ 6 ಕಿ.ಮೀ ದೂರದಲ್ಲಿದೆ.