ಬಸವಣ್ಣನ ವಚನವನ್ನು ಹಾಡುವುದೆಂದರೆ ನನಗೆ ನಮ್ಮ ಮೂಲಕ್ಕೆ ಮರಳಿ ಹೋಗುವಂಥ ಅನುಭವ. ನಾವು ಏನನ್ನು ಅರ್ಥೈಸಿಕೊಳ್ಳಬೇಕೋ, ಏನನ್ನು ಅನುಭವಿಸಬೇಕೋ ಅದನ್ನು ತಮ್ಮ ಸರಳ ಪದಗಳ ಮೂಲಕ ಬಾಣದಂತೆ ನೇರ ಎದೆಗೆ ನಾಟಿಸಿದರು. ಅವರ ವಚನ ಹಾಡುತ್ತಿದ್ದರೆ ಧ್ಯಾನ ಮಾಡಿದಂತೆ ಅನ್ನಿಸುತ್ತದೆ. ಆ ಕ್ಷಣಕ್ಕೆ ಎದೆಯಲ್ಲಿ ಸಂಚಲನವಾಗುತ್ತದೆ. ಹಾಡು ಮುಗಿದ ನಂತರವೂ ಅದರ ಸಾರ ನಮ್ಮ ಸುತ್ತ ಸುಳಿಯುತ್ತಲೇ ಇರುತ್ತದೆ. ಬಸವಣ್ಣ ನನಗೆ ಮುಖ್ಯ ಅನ್ನಿಸುವುದು, ಜೀವನದ ಎಲ್ಲಾ ಘಟ್ಟದಲ್ಲೂ ಎಂಥ ಪರಿಸ್ಥಿತಿಯಲ್ಲೂ ಯಾವುದೂ ನಮ್ಮದಲ್ಲ ಎಂದುಕೊಂಡು ಮುಂದೆ ಹೋಗಲು ಹಾಗೂ ಆ ಸ್ಥಿತಪ್ರಜ್ಞತೆಯನ್ನು ಮನಗಾಣಿಸಲು ಅನುವು ಮಾಡಿಕೊಡುವ ಅನುಭವದ ನುಡಿಗಳಿಂದ. ಈಗಿನ ಕಾಲಕ್ಕೆ ತಕ್ಕಂತೆ ಹೇಳಬೇಕೆಂದರೆ, ಅವರ ವಚನಗಳು, ನಿಜ ಜೀವನಕ್ಕೆ ‘ಹೆಲ್ಪ್ ಡೆಸ್ಕ್’ ಇದ್ದಂತೆ.