ರಾಜಧಾನಿಯಲ್ಲಿ ಇಂದಿನಿಂದ ಶಾ ಹವಾ

ಬೆಂಗಳೂರು: ‘ಕರುನಾಡ ಜಾಗೃತಿ ಯಾತ್ರೆ’ ಅಂಗವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಇದೇ 18 ಮತ್ತು 19ರಂದು ರಾಜಧಾನಿಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಇಲ್ಲಿ ಮಾತನಾಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ‘ಬಸವ ಜಯಂತಿ ಅಂಗವಾಗಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಹಿರಿಯ ಸಂಶೋಧಕ ಎಂ.ಚಿದಾನಂದಮೂರ್ತಿ ಹಾಗೂ ಕವಿ ಸಿದ್ಧಲಿಂಗಯ್ಯ ಅವರ ಮನೆಗಳಿಗೆ ತೆರಳಿ ಪ್ರಣಾಳಿಕೆ ಬಗ್ಗೆ ಸಲಹೆ ಪಡೆಯಲಿದ್ದಾರೆ’ ಎಂದರು.
‘ಶಾ ಪ್ರವಾಸ ರಾಜ್ಯ ಬಿಜೆಪಿಗೆ ಶಕ್ತಿ ಹಾಗೂ ಕಾರ್ಯಕರ್ತರಲ್ಲಿ ಚೈತನ್ಯ ತುಂಬಲಿದೆ. ನಗರದ 28 ಕ್ಷೇತ್ರಗಳಲ್ಲಿ ಪಕ್ಷ ಬಲಪಡಿಸಲು ಒತ್ತು ನೀಡಲಿದ್ದಾರೆ’ ಎಂದರು.
‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇದೇ 19ರಂದು ಶಿಕಾರಿಪುರದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಛತ್ತೀಸಗಡದ ಮುಖ್ಯಮಂತ್ರಿ ರಮಣ ಸಿಂಗ್ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ಹಾಜರಿರಲಿದ್ದಾರೆ’ ಎಂದರು.
ವಾರ್ ರೂಂ ಸಿದ್ಧ: ಚುನಾವಣೆ ಮುಗಿಯುವ ತನಕ ಹೆಚ್ಚಿನ ಅವಧಿ ಅಮಿತ್ ಶಾ ರಾಜ್ಯದಲ್ಲಿದ್ದು ಕಾರ್ಯತಂತ್ರ ರೂಪಿಸಲಿದ್ದಾರೆ. ನಗರದ ಬಸವೇಶ್ವರ ವೃತ್ತದ ಬಳಿ ಆರು ಕೊಠಡಿಗಳ ಮನೆ ಸಿದ್ಧವಾಗಿದೆ. ಮನೆಯನ್ನು ಭದ್ರತಾ ಸಿಬ್ಬಂದಿ ಮಂಗಳವಾರ ಪರಿಶೀಲಿಸಿದರು.