ಮಂಗಳೂರು: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಚಿವ ಬಿ.ರಮಾನಾಥ ರೈ ಬುಧವಾರ ಬೆಳಿಗ್ಗೆ ಪಕ್ಷದ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರನ್ನು ಭೇಟಿಮಾಡಿ ಕಾಲಿಗೆರಗಿ ಆಶೀರ್ವಾದ ಪಡೆದರು.
ಕೆಲವು ದಿನಗಳಿಂದ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಸಂಬಂಧ ಹಲವು ಬಾರಿ ವಾಕ್ಸಮರವೂ ನಡೆದಿತ್ತು.
ರೈ ಕಾಂಗ್ರೆಸ್ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ. ಈ ಕಾರಣದಿಂದ ತಮ್ಮ ರಾಜಕೀಯ ಗುರು ಪೂಜಾರಿ ಅವರ ಮನೆಗೆ ತೆರಳಿ ಆಶೀರ್ವಾದ ಪಡೆದರು.
ಪೂಜಾರಿ ಅವರು ಅನಾರೋಗ್ಯದ ಕಾರಣದಿಂದ ಹಲವು ದಿನಗಳಿಂದ ಬಂಟ್ವಾಳದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಬುಧವಾರ ಬೆಳಿಗ್ಗೆ ಅವರ ಮನೆಗೆ ತೆರಳಿದ ಸಚಿವ ರೈ ಕಾಲಿಗೆರಗಿ ನಮಸ್ಕರಿದರು. ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
'ಬಂಟ್ವಾಳ ಕ್ಷೇತ್ರದ ಜನರು ಬುದ್ಧಿವಂತರು. ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೇ ಈ ಬಾರಿಯೂ ಅಭಿವೃದ್ಧಿಯ ಪರ ಮತ ಚಲಾಯಿಸುತ್ತಾರೆ. ದೇವರು ನಿಮ್ಮನ್ನು ಕೈ ಬಿಡುವುದಿಲ್ಲ' ಎಂದು ಪೂಜಾರಿ ಹರಸಿದರು.
ರೈ ಅವರು ಹೊರಡುವ ಮುನ್ನ ಅವರೊಂದಿಗೆ ಕಾರಿನವರೆಗೂ ನಡೆದುಕೊಂಡು ಬಂದು ಬೀಳ್ಕೊಟ್ಟರು. ಇತ್ತೀಚಿಗೆ ಕಾಂಗ್ರೆಸ್ ಸೇರಿರುವ ವಿಜಯಾ ಬ್ಯಾಂಕ್ ಮಾಜಿ ಉದ್ಯೋಗಿ ಬೇಬಿ ಕುಂದರ್ ಜೊತೆಗಿದ್ದರು.