ಮಡಿಕೇರಿ: ನಾಪೋಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ಕುಲ್ಲೇಟಿರ ಹಾಕಿ ಉತ್ಸವದ ಮೂರನೇ ದಿನವಾದ ಬುಧವಾರ ನಿಡುಮಂಡ ತಂಡದ ವಿರುದ್ಧ ಮೊಣ್ಣಂಡ ತಂಡವು 4–0 ಅಂತರದಲ್ಲಿ ಜಯಿಸಿತು. ಮೊಣ್ಣಂಡ ಪರ ನಿತಿನ್ ಮೂರು, ತಶಮೈ ಒಂದು ಗೋಲು ಗಳಿಸಿ ತಂಡದ ಜಯಕ್ಕೆ ನೆರವಾದರು.
ಮಲ್ಲಂಗಡ ತಂಡವು ಕುಂದಿರ ತಂಡವನ್ನು 4– 0 ಅಂತರದಲ್ಲಿ, ಬಟ್ಟೀರ ತಂಡವು ಮಲ್ಲೇಂಗಡ ತಂಡವನ್ನು 1– 0 ಅಂತರದಲ್ಲಿ ಮಣಿಸಲು ಯಶಸ್ವಿಯಾಯಿತು. ಕರವಂಡ ತಂಡವು ನಂಬಡಮಂಡ ವಿರುದ್ಧವೂ, ಕೇಳಪ್ಪಂಡ ತಂಡವು ಪುಲ್ಲೇರ ತಂಡ ವಿರುದ್ಧವೂ ಜಯ ಸಾಧಿಸಿದವು.
ತೀತಿಮಡ ತಂಡವು ಮುಂಡಂಡ ತಂಡವನ್ನು 3– 0 ಅಂತರದಿಂದ ಪರಾಭವಗೊಳಿಸಿತು. ತೀತಿಮಡ ಪರ ಪ್ರಜ್ವಲ್ ಬೋಪಯ್ಯ ಎರಡು, ಸುಶಾನ್ ಬಿದ್ದಪ್ಪ ಒಂದು ಗೋಲು ದಾಖಲಿಸಿದರು. ತಿರೋಡಿರ ತಂಡವು ಜಬ್ಬಂಡವನ್ನು 3– 0 ಅಂತರದಲ್ಲಿ ಸೋಲಿಸಿತು.
ಕಾಂಡೆರ ತಂಡವು ಪಟ್ರಂಗಡ ತಂಡವನ್ನು 6– 0 ಅಂತರದಲ್ಲಿ ಸೋಲಿಸಿತು. ಕಾಂಡೆರ ಪರ ರೋಹನ್ ತಿಮ್ಮಯ್ಯ ಎರಡು, ರಜತ್, ದೀಕ್ಷಿತ್, ಸಜನ್, ಬಾದಲ್ ತಲಾ ಒಂದೊಂದು ಗೋಲು ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು.