ಬೆಂಗಳೂರು: ‘ನೋಟು ರದ್ದತಿಯಿಂದ ಉಂಟಾಗಿದ್ದ ಸಮಸ್ಯೆ ಇನ್ನೂ ಪರಿಹಾರ ಕಂಡಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸೂಟುಬೂಟು ಸರ್ಕಾರಕ್ಕೆ ಜನರ ಸಂಕಷ್ಟ ಅರ್ಥವಾಗುತ್ತಿಲ್ಲ’ ಎಂದು ಎಐಸಿಸಿ ಮಾಧ್ಯಮ ಸಂವಹನ ವಿಭಾಗದ ಸಂಯೋಜಕಿ ಪ್ರಿಯಾಂಕಾ ಚತುರ್ವೇದಿ ಟೀಕಿಸಿದರು.
‘ಸಾಮಾನ್ಯ ಜನರು ಎಟಿಎಂಗಳ ಎದುರು ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ಮತ್ತೆ ನಿರ್ಮಾಣವಾಗಿದೆ. ಅಷ್ಟೇ ಅಲ್ಲ, ಬಹುತೇಕ ಎಟಿಎಂಗಳಲ್ಲಿ ‘ನೋ ಕ್ಯಾಶ್’ ಬೋರ್ಡ್ ಕಾಣಿಸುತ್ತದೆ. ಆದರೆ, ಕೆಲವರು ಜನರ ಹಣ ಲೂಟಿ ಹೊಡೆದು ವಿದೇಶಕ್ಕೆ ಪರಾರಿಯಾಗಿದ್ದಾರೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಹೇಳಿದರು.
ಕೇಂದ್ರ ಸರ್ಕಾರಕ್ಕೆ ₹ 61,000 ಕೋಟಿ ನಷ್ಟವಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆ ಎಂದ ಅವರು, ‘ನೋಟು ರದ್ದತಿ ಬಳಿಕ ನಗದುರಹಿತ ವ್ಯವಹಾರ ಹೆಚ್ಚಿಲ್ಲ. ಪ್ರಧಾನಿ ಸುಳ್ಳು ಹೇಳುವುದನ್ನು ಮೊದಲು ನಿಲ್ಲಿಸಲಿ’ ಎಂದರು.