ಬೆಂಗಳೂರು: ಚುನಾವಣಾ ಆಯೋಗ ಈವರೆಗೆ ₹ 34.39 ಕೋಟಿ ನಗದು ವಶಪಡಿಸಿಕೊಂಡಿದ್ದು, ಹಿಂದಿನ ಎರಡು ಚುನಾವಣೆಗಳಿಗೆ ಹೋಲಿಸಿದರೆ ಇದು ಅತಿ ಹೆಚ್ಚು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.
2013ರ ವಿಧಾನಸಭೆ ಚುನಾವಣೆಯಲ್ಲಿ ₹ 14.42 ಕೋಟಿ ಮತ್ತು 2014ರ ಲೋಕಸಭೆ ಚುನಾವಣೆಯಲ್ಲಿ ₹ 28.08 ಕೋಟಿ ವಶಪಡಿಸಿಕೊಳ್ಳಲಾಗಿತ್ತು ಎಂದು ಅವರು ಗುರುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಮದ್ಯ ವಶಪಡಿಸಿಕೊಂಡ ಪ್ರಮಾಣವೂ ಈ ಬಾರಿ ಹೆಚ್ಚಾಗಿದೆ. ಲ್ಯಾಪ್ಟಾಪ್, ಸೀರೆ ಮತ್ತು ಇತರ ಗೃಹೋಪಯೋಗಿ ವಸ್ತುಗಳ ಮೌಲ್ಯ ₹ 19.36 ಕೋಟಿ ಎಂದರು.
ಈ ಚುನಾವಣೆಯಲ್ಲಿ ಇಲ್ಲಿಯವರೆಗೆ ₹ 3.71 ಕೋಟಿ ಮೌಲ್ಯದ 14.49 ಕೆ.ಜಿ ಚಿನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸಂಜೀವ್ ಕುಮಾರ್ ತಿಳಿಸಿದರು.
‘ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಬಳಿಕ ಹಾಸನ ಜಿಲ್ಲೆಯಲ್ಲಿ ಚುನಾವಣಾ ಕಾರ್ಯಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಸರ್ಕಾರದಿಂದ ವರದಿ ಕೇಳಿದ್ದೇವೆ. ರೋಹಿಣಿ ವರ್ಗಾವಣೆ ವಿಚಾರ ಸರ್ಕಾರಕ್ಕೆ ಸಂಬಂಧಿಸಿದ್ದು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.