ಮೈಸೂರು: ಅಭ್ಯರ್ಥಿಯೊಬ್ಬರನ್ನು ಸೋಲಿಸುವ ಸಂಬಂಧ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ, ಜೆಡಿಎಸ್ ಮುಖಂಡರೊಂದಿಗೆ ಗೋಪ್ಯವಾಗಿ ಚರ್ಚಿಸಿದ್ದಾರೆ ಎನ್ನಲಾದ ವಿಡಿಯೊ ವೈರಲ್ ಆಗಿದೆ.
‘ಇನ್ನೂ ಆತ ಅಭ್ಯರ್ಥಿ. ಈಗಲೇ ಅಪ್ಪ– ಮಗ ಸೇರಿ ದೌರ್ಜನ್ಯ ನಡೆಸುತ್ತಿದ್ದಾರೆ. ಇನ್ನೇನಾದರೂ ಗೆದ್ದು ಮಂತ್ರಿ ಆದರೆ ಎಷ್ಟು ಜನರನ್ನು ತುಳಿಯಬಹುದು’ ಎಂದಿದ್ದಾರೆ. ಕೆ.ಆರ್.ನಗರ ಕ್ಷೇತ್ರ ವ್ಯಾಪ್ತಿಯ ಸಾಲಿಗ್ರಾಮದ ಮುಖಂಡರು ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಈ ರೀತಿ ಹೇಳಿದ್ದಾರೆ ಎನ್ನಲಾಗಿದೆ.
‘ಇಡೀ ತಾಲ್ಲೂಕನ್ನು ಕಾಪಾಡುವ ಜವಾಬ್ದಾರಿ ನನ್ನದು. ನನ್ನ ಹೆಸರು ಹೇಳಿಕೊಂಡು ಓಪನ್ ಆಗಿ ಪ್ರಚಾರ ಮಾಡಿ’ ಎಂದು ಹುರಿದುಂಬಿಸಿದ್ದಾರೆ. ಆಗ ಮುಖಂಡರು ‘ಆಯ್ತಕ್ಕ, ನೀವ್ ಹೇಳಿ ಸಾಕು’ ಎಂದಿದ್ದಾರೆ.
ಕ್ಷೇತ್ರ ಹಾಗೂ ಅಭ್ಯರ್ಥಿ ಹೆಸರನ್ನು ವಿಡಿಯೊದಲ್ಲಿ ಪ್ರಸ್ತಾಪ ಮಾಡಿಲ್ಲ. ಹರೀಶ್, ಚೇತು ಎಂಬುವವರ ಹೆಸರು ಹೇಳಿದ್ದಾರೆ ಅಷ್ಟೆ.
‘ಇದು ವಿರೋಧ ಪಕ್ಷದವರ ಸಂಚಾಗಿರಬಹುದು. ಭವಾನಿ ಅವರು ನನ್ನ ಹೆಸರನ್ನು ಎಲ್ಲೂ ಹೇಳಿಲ್ಲ. ಅಷ್ಟಕ್ಕೂ ಅಭ್ಯರ್ಥಿ ಎಂದಿದ್ದಾರೆ. ನಾನೀಗ ಶಾಸಕ. ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಹೇಳಿರಬಹುದು. ಅವರು ಹಿಂದಿನ ಚುನಾವಣೆಗಳಲ್ಲಿ ನನ್ನ ಪರ ಪ್ರಚಾರ ನಡೆಸಿದ್ದಾರೆ’ ಎಂದು ಸಾ.ರಾ.ಮಹೇಶ್ ಪ್ರತಿಕ್ರಿಯಿಸಿದ್ದಾರೆ.
ಕೆ.ಆರ್.ನಗರ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಸಾ.ರಾ.ಮಹೇಶ್ ಅವರನ್ನು ಸೋಲಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಅವರ ಬೆಂಬಲಿಗರು ಆರೋಪಿಸಿದ್ದಾರೆ. ಭವಾನಿ ಅವರ ಹೇಳಿಕೆ ಖಂಡಿಸಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಎಂ.ಟಿ.ಅಣ್ಣೇಗೌಡ ಮುಂದಾಗಿದ್ದಾರೆ.