ಬೆಂಗಳೂರು: ವಿವಿಧ ಕರ್ತವ್ಯದ ನಿಮಿತ್ತ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಗಳಿಕೆ ರಜೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.
ಈ ಸಂಬಂಧ ಗುರುವಾರ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಪ್ರೌಢ ಶಿಕ್ಷಣ ನಿರ್ದೇಶಕರಾದ ಫಿಲೋಮಿನಾ ಲೋಬೊ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಬೇಡಿಕೆಗಳು: ಬೇಸಿಗೆ ರಜೆ ಇದ್ದಾಗ್ಯೂ ಚುನಾವಣಾ ಹಿನ್ನೆಲೆಯಲ್ಲಿ ಅನೇಕ ಶಿಕ್ಷಕರು/ಪ್ರಾಂಶುಪಾಲರು ಕೆಲಸ ಮಾಡುತ್ತಿದ್ದಾರೆ. ಇಂಥವರಿಗೆ ನಾಗರಿಕ ಸೇವಾ ನಿಯಮಗಳ ಪ್ರಕಾರ ಗಳಿಕೆ ರಜೆ ಮಂಜೂರು ಮಾಡಬೇಕು.
ವರ್ಷಪೂರ್ತಿ ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಕೆಲಸ ಮಾಡುವ ಬೂತ್ ಲೆವಲ್ ಅಧಿಕಾರಿಗಳಿಗೆ (ಬಿಎಲ್ಒ) ಯಾವುದೇ ರೀತಿಯ ಸೌಲಭ್ಯ ನೀಡಲಾಗುತ್ತಿಲ್ಲ. ರಾಜ್ಯದ ಬಹುತೇಕ ಶಿಕ್ಷಕರು ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಥವರಿಗೆ ಗಳಿಕೆ ರಜೆ ಇಲ್ಲವೇ ಗೌರವ ಧನ ನೀಡಬೇಕು.
ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿ ಕೆಲಸ ಮಾಡುತ್ತಿರುವ ಎಸ್ಎಸ್ಎ ಶಿಕ್ಷಕರು ಸಿ.ಆರ್.ಪಿ, ಬಿಆರ್ಪಿ ಹಾಗೂ ಸಿಬ್ಬಂದಿ ವೇತನ ಇಲ್ಲದೆ ಪರದಾಡುತ್ತಿದ್ದಾರೆ. ಹೀಗಾಗಿ ಕೂಡಲೇ ತಾಂತ್ರಿಕ ದೋಷ ಸರಿಪಡಿಸಿ ಎಸ್ಎಸ್ಎ ಶಿಕ್ಷಕರ ವೇತನಕ್ಕೆ ಸಂಬಂಧಿಸಿದ ಅನುದಾನ ಬಿಡುಗಡೆ ಮಾಡಬೇಕು.