ಎಂ.ಕೆ.ಹುಬ್ಬಳ್ಳಿ: ಸಮೀಪದ ಅಂಬಡಗಟ್ಟಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಗುರುವಾರ ಮದುವೆಯಿಂದ ಮರಳಿ ಬರುತ್ತಿದ್ದ ಮಿನಿ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಮಕ್ಕಳೂ ಸೇರಿ, 15 ಜನ ಗಾಯಗೊಂಡಿದ್ದಾರೆ.
ಧಾರವಾಡ ತಾಲ್ಲೂಕಿನ ತೇಗೂರ ಗ್ರಾಮದಿಂದ ಮದುವೆ ಮುಗಿಸಿಕೊಂಡು ಮರಳಿ ಬರುವಾಗ ಈ ಅವಘಡ ನಡೆದಿದೆ. ಗಂಭೀರವಾಗಿ ಗಾಯಗೊಂಡವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರಿಗೆ ಎಂ.ಕೆ.ಹುಬ್ಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈದ್ಯರ ವಿರುದ್ಧ ಆಕ್ರೋಶ:
ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಎಂ.ಕೆ.ಹುಬ್ಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಲಭ್ಯವಿಲ್ಲದ ಕಾರಣ ಗಾಯಾಳುಗಳು ಹಾಗೂ ಸಂಬಂಧಿಕರು ವೈದ್ಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.