ಕೋಲಾರ: ‘ಮತದಾರರು ತಮ್ಮ ಜವಾಬ್ದಾರಿ ಅರಿತು ಮತದಾನ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಈ ನೆಲ ಈ ಜಲ ಸಾಂಸ್ಕೃತಿ ಸಂಸ್ಥೆಯ ಅಧ್ಯಕ್ಷ ವೆಂಕಟಚಲಪತಿ ತಿಳಿಸಿದರು.
ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯಿಂದ ನಗರದ ಅಂಚೆ ಕಚೇರಿ ಹಾಗೂ ಕುರುಬರಪೇಟೆಯಲ್ಲಿ ಗುರುವಾರ ಮತದಾನ ಕುರಿತು ನಡೆದ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
‘ಮತದಾನ ಪ್ರತಿಯೊಬ್ಬರ ಹಕ್ಕು. ತಪ್ಪದೆ ಪ್ರತಿಯೊಬ್ಬರೂ ಮತಚಲಾಯಿಸಬೇಕು. ಅಂಚೆ ಕಚೇರಿಗೆ ಪ್ರತಿದಿನ ಸಾವಿರಾರು ಗ್ರಾಹಕರು ಬರುತ್ತಿರುತ್ತಾರೆ. ಅವರಿಗೆ ಮತದಾನ ಕುರಿತು ಜಾಗೃತಿ ಮೂಡಿಸುವ ಕೆಲಸ ಅಧಿಕಾರಿಗಳಿಂದ ಆಗಬೇಕಾಗಿದೆ. ಯಾವುದೇ ಅಮಿಷಗಳಿಗೆ ಒಳಗಾಗದೆ ಮತ ಚಲಾಯಿಸಿದರೆ ಸಮಾಜದಲ್ಲಿ ಗೌರವ ಸಿಗುತ್ತದೆ’ ಎಂದು ಹೇಳಿದರು.
‘ಪ್ರಜಾಪ್ರಭುತ್ವದಲ್ಲಿ ಹಕ್ಕು ಚಲಾಯಿಸುವುದು 18 ವರ್ಷ ತುಂಬಿದ ಪ್ರತಿಯೊಬ್ಬರ ಕರ್ತವ್ಯ. ಇನ್ನೊಬ್ಬರ ಹೆಸರಿನಲ್ಲಿ ಮತದಾನ ಮಾಡುವುದು ಅಕ್ಷಮ್ಯ ಅಪರಾಧ ಮತ್ತು ಶಿಕ್ಷಾರ್ಹ. ನ್ಯಾಯಸಮ್ಮತ, ಶಾಂತಿಯುತ ಚುನಾವಣೆಗೆ ಸಹಕರಿಸಬೇಕು’ ಎಂದರು.
ನಗರದ ಕುರುಬರಪೇಟೆ ಕ್ರೀಡಾ ಇಲಾಖೆ ಮುಂದೆ ಅತಿ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತದಾನ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಅಂಚೆ ಅಧೀಕ್ಷಕ ಶ್ರೀಧರ್, ನೆಹರೂ ಯುವ ಕೇಂದ್ರದ ಸದಸ್ಯ ಪ್ರವೀಣ್ ಕುಮಾರ್, ವೆಂಕಟೇಶ್ ಹಾಜರಿದ್ದರು.