ಒಂದೆಡೆ ಬದುಕಿಗೆ ವ್ಯವಸಾಯವನ್ನೇ ನಂಬಿರುವ ರೈತರು ಎತ್ತಿನಗಾಡಿಗಳಲ್ಲಿ ಕುಟುಂಬ ಸಮೇತ ಬಂದು, ಒಳ್ಳೆಯ ಮಳೆ-ಬೆಳೆಗೆ ಪ್ರಾರ್ಥಿಸುವ ದೃಶ್ಯ. ಮತ್ತೊಂದೆಡೆ ನವ ವಿವಾಹಿತೆಯರು ತವರಿನವರಿಂದ ಹಸಿರು ಬಳೆ-ಮಡಿಲಕ್ಕಿ ಉಡುಗೊರೆ ಸ್ವೀಕರಿಸುವ ದೃಶ್ಯ. ಮಗದೊಂದು ಕಡೆ ಎಳೆಯ ಮಕ್ಕಳು ಬೆಂಡು-ಬತ್ತಾಸು ಚಪ್ಪರಿಸುತ್ತ ಜಗತ್ತನ್ನೇ ಮರೆತವರಂತೆ ಜಾತ್ರಾ ಸ್ಥಳದಲ್ಲಿ ಓಡಾಡುತ್ತಿದ್ದ ನೋಟ ಶುಕ್ರವಾರ ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಕೆಳಭಾಗದಲ್ಲಿರುವ ಕಣಿವೆ ಮಾರಮ್ಮ ದೇವಿಯ ರಥೋತ್ಸವದಲ್ಲಿ ಕಂಡುಬಂದಿತು.