ನರೇಗಲ್ (ಗದಗ ಜಿಲ್ಲೆ): ‘ರಾಜಕೀಯದಲ್ಲಿ ಇರುವ ಕೊನೇ ಕ್ಷಣದವರೆಗೂ ಜನಪರ ಆಡಳಿತ ನೀಡುತ್ತೇನೆ; ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ' ಎಂದು ಕೋರ್ಟ್ ಅಫಿಡವಿಟ್ ಮಾಡಿಸಿ, ಆ ಪ್ರಮಾಣಪತ್ರವನ್ನು ಜನರ ಮುಂದಿಟ್ಟು ಮತ ಯಾಚಿಸುವುದಾಗಿ ರೋಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವೀಂದ್ರನಾಥ ದೊಡ್ಡಮೇಟಿ ಹೇಳಿದರು.
‘ಮಾತಿಗೆ ತಪ್ಪಿದರೆ ಜನ ನನ್ನ ವಿರುದ್ಧ ಪ್ರಕರಣ ದಾಖಲಿಸಬಹುದು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರವೀಂದ್ರನಾಥ ಅವರು ಕರ್ನಾಟಕ ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿ ಕುಟುಂಬದ ಮೂರನೆಯ ತಲೆಮಾರು.
ಕೆರೆಗಳ ಅಭಿವೃದ್ಧಿ, ರಸ್ತೆ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ, ಪರಿಸರ ಸಂರಕ್ಷಣೆ ಸೇರಿ ಅಭಿವೃದ್ಧಿಯ ಕುರಿತು ದೂರದೃಷ್ಟಿಯ ವಿಚಾರಗಳನ್ನು ಕ್ಷೇತ್ರದ ಪ್ರತಿ ಮತದಾರನ ಮನೆಯ ಬಾಗಿಲಿಗೆ ತಲುಪಿಸಿ ಮತ ಯಾಚನೆ ಮಾಡುವುದಾಗಿ ತಿಳಿಸಿದರು.