ಸಿರುಗುಪ್ಪ : ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ ಹಣಕ್ಕಾಗಿ ಟಿಕೆಟ್ ಅನ್ನು ಮುರಳಿಕೃಷ್ಣ ಅವರಿಗೆ ಮಾರಿಕೊಂಡಿದ್ದಾರೆ ಎಂಬ ಆರೋಪಕ್ಕೆ ಶುಕ್ರವಾರ ರಾತ್ರಿ ಸಮೀಪದ ದಢೇಸೂಗೂರು ದರ್ಗಾದಲ್ಲಿ ಮೂವರು ನಾಯಕರು ಆಣೆ ಪ್ರಮಾಣ ಮಾಡಿ ವದಂತಿಗಳಿಗೆ ತೆರೆ ಎಳೆದರು.
ಹಣಕ್ಕಾಗಿ ಟಿಕೆಟ್ ಮಾರಿಲ್ಲ ಎಂದು ಶಾಸಕ ಬಿ.ಎಂ.ನಾಗರಾಜ ಪ್ರಮಾಣ ಮಾಡಿದರೆ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ನಾಗೇಂದ್ರ ಮತ್ತು ಸಿರುಗುಪ್ಪ ಕ್ಷೇತ್ರದ ಟಿಕೆಟ್ ಪಡೆದ ಮುರಳಿಕೃಷ್ಣ ಹಣ ನೀಡಿ ಟಿಕೆಟ್ ಖರೀದಿಸಿಲ್ಲ ಎಂದು ದರ್ಗಾದಲ್ಲಿ ದೇವರ ಮೇಲೆ ಕೈಯಿಟ್ಟು ಪ್ರಮಾಣ ಮಾಡಿದರು.
ನಗರದಲ್ಲಿರುವ ಶಾಸಕರ ಹಾಗೂ ಮನೆಯ ಮುಂದೆ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗ ಸಭೆಯನ್ನು ನಡೆಸಿದ ಈ ಮೂವರು ನಾಯಕರು ಮಾತನಾಡಿ ಅಭಿಮಾನಿಗಳನ್ನು, ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.
ಕ್ಷೇತ್ರದಲ್ಲಿ ಟಿಕೆಟ್ ಮಾರಿಕೊಂಡಿದ್ದಾನೆ ಎಂಬ ವದಂತಿ ಹರಡಿದೆ ಇದರಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ,ಮೊದಲು ಇತ್ಯರ್ಥವಾಗಲಿ ಇದರ ಬಗ್ಗೆ ದರ್ಗಾ ಮತ್ತು ಮಾರಿಕಾಂಬ ದೇವಸ್ಥಾನದಲ್ಲಿ ಪ್ರಮಾಣ ಮಾಡೋಣ ಎಂದು ನಾಗರಾಜ ಇಂಗಿತ ವ್ಯಕ್ತಪಡಿಸಿದರು.
ಅದಕ್ಕೆ ಒಪ್ಪಿದ ನಾಗೇಂದ್ರ ಮತ್ತು ಮುರಳಿಕೃಷ್ಣ ದರ್ಗಾ ಮತ್ತು ಮಾರಿಕಾಂಬ ದೇವಸ್ಥಾನಕ್ಕೆ ತೆರಳಿ ಆಣೆ ಪ್ರಮಾಣ ಮಾಡಿ ವದಂತಿಗೆ ತೆರೆ ಎಳೆದರು.
ನನಗೆ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ ಅದಕ್ಕಾಗಿ ಚುನಾವಣೆಯಿಂದ ಹಿಂದೆ ಸರಿಯಬೇಕಾಯಿತು ಎಂದು ಶಾಸಕ ನಾಗರಾಜ ತಿಳಿಸಿ
ಟಿಕೆಟ್ ಪಡೆದಿರುವ ಮುಳಿಕೃಷ್ಣನನ್ನು ಅತ್ಯಂತ ಬಹುಮತದಿಂದ ಗೆಲುವು ಸಾಧಿಸಲು ಎಲ್ಲರೂ ಶ್ರಮಿಸೋಣ ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು.
ಬಿ.ನಾಗೇಂದ್ರ ಮಾತನಾಡಿ, ಶಾಸಕರ ನೇತೃತ್ವದಲ್ಲಿಯೇ ಮಾರ್ಗದರ್ಶನ ಪಡೆದು ಚುನಾವಣೆ ಎದುರಿಸೋಣ ಎಂದು ನೆರೆದ
ಕಾರ್ಯಕರ್ತರಿಗೆ ಮನವಿ ಮಾಡಿದರು. ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕರಿಬಸಪ್ಪ ಮುಖಂಡರಾದ ಎಚ್.ಎಂ.ಮಲ್ಲಿಕಾರ್ಜುನ, ಟಿ.ಎಂ.ಸಿದ್ದರಾಮಯ್ಯ ಇದ್ದರು.