ಉಡುಪಿ: ಸಮೃದ್ಧ ಕಾಪು ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದೇನೆ, ಮಂಜೂರಾಗಿರುವ ಹಲವಾರು ಯೋಜನೆ ಪೂರ್ಣಗೊಳಿಸುವ ಮೂಲಕ ಗುರಿ ಸಾಧನೆ ಮಾಡಬೇಕಿದೆ ಎಂದು ಕಾಪು ಶಾಸಕ ವಿನಯ ಕುಮಾರ ಸೊರಕೆ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ವಿಷಯದಲ್ಲಿ ಈ ಕ್ಷೇತ್ರ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಗ್ರಾಮ ಪಂಚಾ ಯಿತಿ ಆಗಿದ್ದ ಕಾಪು ಈಗ ಪುರಸಭೆ ಹಾಗೂ ತಾಲ್ಲೂಕು ಆಗಿದೆ. ಆದರೆ, 33 ಸರ್ಕಾರಿ ಕಚೇರಿ ತರಬೇಕಿದೆ. ಮಿನಿ ವಿಧಾನಸೌಧ ನಿರ್ಮಾಣ ಮಾಡಬೇಕಿದೆ. ನ್ಯಾಯಾಲಯವೂ ಆರಂಭ ವಾಗಬೇಕಿದೆ. ಒಟ್ಟಾರೆ ಸಮೃದ್ಧ ಕಾಪು ನಿರ್ಮಾಣದ ಗುರಿಯೊಂದಿಗೆ ಕೆಲಸ ಮಾಡಲಾಗುತ್ತಿದೆ ಎಂದರು.
ಕ್ಷೇತ್ರದಲ್ಲಿ ಉದ್ಯೋಗಾವಕಾಶ ಸೃಷ್ಟಿಗಾಗಿ ಸುಮಾರು 68 ಎಕರೆ ಜಾಗದಲ್ಲಿ 300 ಸಣ್ಣ ಕೈಗಾರಿಕೆ ಆರಂಭಿಸುವ ಯೋಜನೆ ಇದೆ. ಯುಪಿಸಿಎಲ್ ವಿಸ್ತರಣೆಗೆ ಮುನ್ನ ಪ್ರದೇಶದ ಧಾರಣ ಶಕ್ತಿ ಅಧ್ಯಯನ ವರದಿ ಬಂದ ನಂತರವಷ್ಟೇ ಅದರ ಬಗ್ಗೆ ಚಿಂತನೆ ನಡೆಸಲಾ ಗುತ್ತದೆ. ಪ್ರವಾ ಸೋದ್ಯಮ ಅಭಿವೃದ್ಧಿಗೆ ಭರಪೂರ ಅ ವಕಾಶ ಇದೆ. ಇದಕ್ಕೆ ಒತ್ತು ನೀಡುವ ಮೂಲಕ ಸಾವಿರಾರು ಉದ್ಯೋಗ ಸೃಷ್ಟಿಸಬಹುದು. ಇಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳು ಕೆಲಸ ಹುಡುಕಿಕೊಂಡು ಪರ ಊರಿಗೆ ಹೋಗದಂತೆ ವ್ಯವಸ್ಥೆ ಮಾಡಲಾಗುವುದು. ಉದ್ಯಮಿಗಳು ಸಹ ತಮ್ಮ ಊರಿನಲ್ಲೇ ದೊಡ್ಡ ಉದ್ಯಮ ಆರಂಭದ ವಾತಾವರಣ ನಿರ್ಮಾಣ ಸೃಷ್ಟಿಸಲಾಗುವುದು ಎಂದರು.
ಅಭಿವೃದ್ಧಿ ಆಗಿಲ್ಲ ಎಂಬ ಕರ್ನಾಟಕ ಜನ ಶಕ್ತಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನುಪಮಾ ಶೆಣೈ ಅವರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಾಹಿತಿ ಕೊರೆತೆಯಿಂದ ವಿನಾಕಾರಣ ಕಾರಣ ಆರೋಪ ಮಾಡುತ್ತಿದ್ದಾರೆ ಎಂದರು.
‘ನಾನು ತೆರೆದಿಟ್ಟ ಪುಸ್ತಕದಂತೆ, ಕಳೆದ 5 ವರ್ಷಗಳಲ್ಲಿ ಕಾಪು ಕ್ಷೇತ್ರದಲ್ಲಿ ಏನೆಲ್ಲಾ ಅಭಿವೃದ್ಧಿ ಮಾಡಿದ್ದೇನೆ ಎಂಬ ಪುಸಕ್ತ ಅವರಿಗೆ ಕಳುಹಿಸುತ್ತೇನೆ. ಕೇವಲ ಬಾಯಿ ಮಾತಿನಿಂದ ಆರೋಪ ಮಾಡುವುದು ಸರಿಯಲ್ಲ. ಸೂಕ್ತವಾದ ದಾಖಲೆ ಇದ್ದರೆ ಬಿಡುಗಡೆ ಮಾಡಲಿ’ ಎಂದು ಸವಾಲು ಹಾಕಿದರು.
ನವೀನ್ ಶೆಟ್ಟಿ, ದಿವಾಕರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ವಿಲ್ಸನ್ ರೋಡ್ರಿಗಸ್, ಪುರಸಭೆ ಉಪಾಧ್ಯಕ್ಷ ಉಸ್ಮಾನ್, ಉಸ್ತುವಾರಿ ಮಹಾಬಲ ಇದ್ದರು.
23ರಂದು ನಾಮಪತ್ರ ಸಲ್ಲಿಕೆ: ಸೊರಕೆ
ಕಾಪು ಕ್ಷೇತದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ವಿನಯ ಕುಮಾರ್ಗ ಸೊರಕೆ ಇದೇ 23ರಂದು ಬೆಳಿಗ್ಗೆ 11ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ನಾಮ ಪತ್ರ ಸಲ್ಲಿಕೆಯ ಮುನ್ನ ಕಾಪು ಜರ್ನಾದನ ಹಾಗೂ ಕಾಪು ಮಾರಿ ಗುಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವರು. ಕೃಷ್ಣ ಮಠ, ಚರ್ಚ್ ಹಾಗೂ ಮಸೀದಿಗೆ ಸಹ ಭೇಟಿ ನೀಡುವರು. ಆ ನಂತರ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸುವರು.
ಸಮೀಕ್ಷೆಗಳೇ ಅತಂತ್ರ!
ಹಲವಾರು ಚುನಾವಣಾ ಪೂರ್ವ ಸಮೀಕ್ಷೆಗಳು ಬಂದಿದ್ದು ವಿಭಿನ್ನ ಫಲಿತಾಂಶವನ್ನು ಊಹಿಸಿವೆ. ಒಂದು ರೀತಿ ಸಮೀಕ್ಷೆಯೇ ಅತಂತ್ರವವಾಗಿವೆ. ಆದರೆ ಈ ಬಾರಿ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಕಾಂಗ್ರೆಸ್ ಸಮೀಕ್ಷೆಯ ಪ್ರಕಾರ 130 ಸ್ಥಾನಗಳು ಲಭಿಸಲಿದೆ. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಹಿರಿಯರು. ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಕಳೆದ ಬಾರಿ ಟಿಕೆಟ್ ಹಾಗೂ ಸಚಿವ ಸ್ಥಾನ ನೀಡುವಂತೆ ಅವರು ಪಕ್ಷಕ್ಕೆ ಶಿಫಾರಸು ಮಾಡಿದ್ದರು. ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಸ್ಕರ್ ಫರ್ನಾಂಡಿಸ್ ಅವರನ್ನೂ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇನೆ ಎಂದು ವಿನಯ ಕುಮಾರ್ ಸೊರಕೆ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.