ಮಳವಳ್ಳಿ: ಶಿಕ್ಷಣವನ್ನು ಜ್ಞಾನ ಸಂಪಾದನೆ ಜತೆಗೆ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೂ ಬಳಸಬೇಕು ಎಂದು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲ ಎಂ.ವಿ.ಕೃಷ್ಣ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಈಚೆಗೆ ನಡೆದ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದ ಯಾವುದೋ ಮೂಲೆಯಲ್ಲಿ ಅತ್ಯಾಚಾರ ನಡೆದರೆ ಗಲ್ಲಿಗೇರಿಸಬೇಕು ಎಂದು ಹೋರಾಟ ಮಾಡುತ್ತೇವೆ. ಪೊಲೀಸರನ್ನು ತಪ್ಪಿತಸ್ಥರನ್ನಾಗಿ ದೂರುತ್ತೇವೆ. ಉತ್ತಮ ನಾಗರಿಕನಾಗಿ, ಸುಸಂಸ್ಕೃತರಾಗಿ ವ್ಯಕ್ತಿ ರೂಪುಗೊಂಡರೆ ಅಂತಹ ಕೃತ್ಯಗಳು ನಡೆಯುವುದಿಲ್ಲ. ಮೊದಲು ಸುಂಸ್ಕೃತರನ್ನಾಗಿ ಬೆಳೆಸುವ ನೈತಿಕತೆ ಬೆಳೆಯಬೇಕು ಎಂದರು.
ಶಿಕ್ಷಣ ಕಲಿತವರು ಜಾತೀಯತೆ, ತಾರತಮ್ಯ ಹಾಗೂ ಸಮಾಜದಲ್ಲಿರುವ ಪಿಡುಗುಗಳ ನಿರ್ಮೂಲನೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಆಗ ದೇಶ ಮತ್ತಷ್ಟು ಸುಸಂಸ್ಕೃತ ದೇಶವಾಗಿ ಬೆಳೆಯುತ್ತದೆ ಎಂದು ಹೇಳಿದರು.
ಉಪನ್ಯಾಸಕ ನಂದೀಶ್ ಮಾತನಾಡಿದರು. ಪ್ರಾಂಶುಪಾಲ ವೆಂಕಟೇಶ್ ಅಧ್ಯಕ್ಷತೆವಹಿಸಿ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.