ಸಾಗರ: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ವೇತನ ನೀಡಲು ಒತ್ತಾಯಿಸಿ ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.
ಎರಡು ತಿಂಗಳಿನಿಂದ ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಶಿಕ್ಷಕರಿಗೆ, ಬಿಆರ್ಸಿ, ಸಿಆರ್ಸಿಗಳಿಗೆ ವೇತನ ದೊರಕಿಲ್ಲ. ಈ ಬಗ್ಗೆ ವಿಚಾರಿಸಿದರೆ ಶಿಕ್ಷಕರಿಗೆ ವೇತನ ನೀಡಲು ಅಗತ್ಯವಿರುವ ಅನುದಾನ ಬಿಡುಗಡೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಿ.ಗಣಪತಪ್ಪ ಮಾತನಾಡಿ, ಬೇಸಿಗೆ ರಜೆಯ ಈ ಸಂದರ್ಭದಲ್ಲಿ ಹಲವು ಶಿಕ್ಷಕರ ಕುಟುಂಬಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಇಂತಹ ಹೊತ್ತಿನಲ್ಲಿ ಅವರಿಗೆ ವೇತನ ದೊರಕದೇ ಇರುವುದರಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಈ ಭಾಗದ 200ಕ್ಕೂ ಹೆಚ್ಚು ಶಿಕ್ಷಕರು ಕಳೆದ ಎರಡು ತಿಂಗಳಿಂದ ಪ್ರತಿದಿನ ಬ್ಯಾಂಕ್ ಖಾತೆಗೆ ವೇತನ ಪಾವತಿಯಾಗಿದೆಯಾ ಎಂದು ವಿಚಾರಿಸುವುದೇ ಆಗಿದೆ. ಕೆಲವು ಶಿಕ್ಷಕರಿಗೆ ಚುನಾವಣೆ ಕರ್ತವ್ಯ ಇರುವುದರಿಂದ ಬೇಸಿಗೆ ರಜೆ ಕೂಡ ದೊರಕುತ್ತಿಲ್ಲ. ಶಿಕ್ಷಣ ಇಲಾಖೆ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಲಿಂಗಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಎಚ್.ತಿಮ್ಮಪ್ಪ, ಕಾರ್ಯದರ್ಶಿ ಡಿ.ಕೆ.ಮೋಳೆ, ಶಾರದಾ, ಎಂ.ವೈ.ಮೂರ್ತಿ, ಗವಿಯಪ್ಪ, ಲಕ್ಷ್ಮಣ್ ನಾಯಕ್, ಗಣಪತಿ ಹಾಜರಿದ್ದರು.