ಸಚಿವ ಚೆನ್ನಾರೆಡ್ಡಿ ರಾಜೀನಾಮೆ ರಾಷ್ಟ್ರಪತಿಗಳಿಂದ ಅಂಗೀಕಾರ
ನವದೆಹಲಿ, ಏ. 27– ಉಕ್ಕು ಮತ್ತು ಗಣಿ ಸಚಿವ ಡಾ. ಎಂ. ಚೆನ್ನಾರೆಡ್ಡಿಯವರು ಇಂದು ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದರು. ಇವರ ಚುನಾವಣೆ ನ್ಯಾಯಬಾಹಿರ ಎಂದು ಆಂಧ್ರಪ್ರದೇಶ ಹೈಕೋರ್ಟು ನಿನ್ನೆ ತೀರ್ಪಿತ್ತಿತ್ತು.
ನಗರದಲ್ಲಿ ದನಗಳ ದೊಡ್ಡರೋಗ
ಬೆಂಗಳೂರು, ಏ. 27– ದನಗಳಿಗೆ ಬರುವ ಅತ್ಯಂತ ಉಗ್ರ ರೋಗವಾದ ‘ದೊಡ್ಡ ರೋಗವು’ ನಗರದಲ್ಲಿ ಕಾಣಿಸಿಕೊಂಡಿದ್ದು ಕೆಲವು ಮುಂಜಾಗರೂಕತೆ ಕ್ರಮಗಳನ್ನು ಕೈಗೊಳ್ಳುವಂತೆ ನಗರದ ದನಗಳ ಮಾಲೀಕರಿಗೆ ಸೂಚನೆ ನೀಡಲಾಗಿದೆ.
ಅತೃಪ್ತ ಪರೀಕ್ಷಕರ ‘ವಿಧಾನಸೌಧ ಚಲೋ’
ಬೆಂಗಳೂರು, ಏ. 27– ದಿನಭತ್ಯವನ್ನು ಹೆಚ್ಚಿಸಲಿಲ್ಲವೆಂಬ ಎಸ್ಸೆಸ್ಸೆಲ್ಸಿ ಪರೀಕ್ಷಕರ ಅಸಮಾಧಾನ ಇಂದು ಚಳವಳಿ ಸ್ವರೂಪವನ್ನು ತಾಳಿ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಪರೀಕ್ಷಕರು ಇಂದು ಕೆಲಸ ಮಾಡದೆ ವಿಧಾನೌಧದ ಮುಂದೆ ಶಾಂತಿಯುತ ಪ್ರದರ್ಶನ ನಡೆಸಿದರು.
ಪರೀಕ್ಷಕರ ವರ್ತನೆ ಬಗ್ಗೆ ಸರಕಾರದ ಅಸಮಾಧಾನ
ಬೆಂಗಳೂರು, ಏ. 27– ನಗರಕ್ಕೆ ಬಂದಿರುವ ಎಸ್ಸೆಸ್ಸೆಲ್ಸಿ ಪರೀಕ್ಷಕರು ದಿನಭತ್ಯ ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಈಡೇರಿಸಿಕೊಳ್ಳಲು ‘ಪ್ರದರ್ಶನ ಮತ್ತು ಮುಷ್ಕರದ ಬೆದರಿಕೆ ವಿಧಾನ’ ಅನುಸರಿಸಿರುವುದನ್ನು ಸರಕಾರವು ತೀವ್ರವಾಗಿ ಗಮನಿಸಿದೆ.
ಮಂಗಳೂರು ಗಲಭೆ: ನ್ಯಾಯಾಂಗ ವಿಚಾರಣೆಗೆ ಶ್ರೀ ಶಿವಪ್ಪನವರ ಒತ್ತಾಯ
ಮಂಗಳೂರು, ಏ. 27– ಮಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಮತೀಯ ಗಲಭೆಗಳ ಬಗ್ಗೆ ಕೂಡಲೆ ನ್ಯಾಯಾಂಗ ತನಿಖೆ ನಡೆಸುವಂತೆ ವಿಧಾನಸಭೆಯಲ್ಲಿನ ವಿರೋಧಪಕ್ಷದ ನಾಯಕ ಶ್ರೀ ಎಸ್. ಶಿವಪ್ಪನವರು ಒತ್ತಾಯಪಡಿಸಿದ್ದಾರೆ.
ಹೃದ್ರೋಗಕ್ಕೆ ಭಾರತದ ಸಂಜೀವಿನಿ
ನವದೆಹಲಿ, ಏ. 27– ಹೃದ್ರೋಗಕ್ಕೆ ಸಂಜೀವಿನಿ. ಪ್ರಪಂಚಕ್ಕೆ ಭಾರತದ ವಿಶಿಷ್ಟ ಕೊಡುಗೆಯಾಗಿ ಇದು ಪರಿಣಮಿಸಲಿದೆ. ಇದುವರೆಗೆ ಯಾರೂ ಕಂಡುಹಿಡಿಯದಿರುವ ಔಷಧವೊಂದನ್ನು ಭಾರತದ ಇಬ್ಬರು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.
ಪೀಲಾಕನೇರ್ ಎಂಬುದು ಹೂಗಿಡ. ಭಾರತದಲ್ಲಿ ಎಲ್ಲೆಲ್ಲಿಯೂ ಈ ಗಿಡ ಬೆಳೆಯುತ್ತದೆ. ಚಿನ್ನದ ಬಣ್ಣದ ಹೂಗಳನ್ನು ಬಿಡುವ ಈ ಗಿಡ ವಿಷಪೂರಿತ, ಕಹಿಯಾದದ್ದು.
ತೋಟಗಳಲ್ಲಿ ಇದನ್ನು ಬೆಳೆಸುತ್ತಾರೆ. ಇದು ಕಾಡಗಿಡವೂ ಹೌದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.