ಕೆಲ ಕ್ಷಣಗಳಲ್ಲೇ ಹೊರ ಬಂದ ಸಹಾಯಕ, ‘ಸಾಹೇಬ್ರು ಚುನಾವಣಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಭಾಷಣ ಬ್ಯಾಡ ಅಂದಿದ್ದಾರೆ’ ಎಂದರು. ‘ನಾವು ಮನವಿ ಕೊಡ್ತೀವಿ ಅಷ್ಟೇ, ಭಾಷಣ ಮಾಡಲ್ಲ’ ಎಂದು ಪಾಟೀಲರ ಬೆಂಬಲಿಗರು ಹೇಳಿದರು. ಮತ್ತೆ ಒಳಗೆ ಓಡಿದ ಸಹಾಯಕ, ಜಿಲ್ಲಾಧಿಕಾರಿಗೆ ಆ ಮಾಹಿತಿಯನ್ನೂ ಕೊಟ್ಟರು. ಅಷ್ಟಾಗಿಯೂ ಕೆಲವು ನಿಮಿಷಗಳ ಕಾಲ ಜಿಲ್ಲಾಧಿಕಾರಿ ಹೊರಬಂದಿಲ್ಲ. ಸಚಿವರು ಅವರಿಗಾಗಿ ಕಾಯುತ್ತಿದ್ದರು. ಸುಮಾರು ಹತ್ತು ನಿಮಿಷದ ಬಳಿಕ ಕೊಠಡಿಯಿಂದ ಹೊರ ಬಂದ ಜಿಲ್ಲಾಧಿಕಾರಿ ಸಚಿವರತ್ತ ಮುಗುಳ್ನಗೆ ಬೀರಿ ಮನವಿ ಪಡೆದರು. ಇಡೀ ಪ್ರಸಂಗವನ್ನು ನೋಡುತ್ತಿದ್ದ ಹಿರಿಯ ಪತ್ರಕರ್ತರೊಬ್ಬರು ‘ನೋಡ್ರೀ ಬದಲಾದ ಕಾಲಘಟ್ಟದ ಮಹಿಮೆಯನ್ನು’ ಎಂದು ಹೇಳಿಕೊಳ್ಳುತ್ತ ಹೊರನಡೆದರು.