ಬೆಂಗಳೂರು: ವಿಧಾನಸಭಾ ಚುನಾವಣೆಗೆ 10 ದಿನಗಳು ಬಾಕಿ ಇರುವಾಗಲೇ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ.
ಜಿಲ್ಲಾ ಚುನಾವಣಾಧಿಕಾರಿಯೂ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್ ಪ್ರಸಾದ್ ಹಠಾತ್ ವರ್ಗಾವಣೆಗೆ ಕಾರಣವನ್ನು ಚುನಾವಣಾ ಆಯೋಗ ತಿಳಿಸಿಲ್ಲ. ಆದರೆ, ನಗರದಲ್ಲಿ ವ್ಯಾಪಕವಾಗಿ ಹಣ ಮತ್ತು ವಸ್ತುಗಳ ಹಂಚುವಿಕೆ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ದೂರುಗಳು ಬಂದಿದ್ದವು ಎಂದು ಮೂಲಗಳು ಹೇಳಿವೆ.
ಇತ್ತೀಚೆಗೆ ಮೈಸೂರು ಜಿಲ್ಲಾಧಿಕಾರಿ ದರ್ಪಣ್ ಜೈನ್ ಅವರನ್ನು ಚುನಾವಣಾ ಕರ್ತವ್ಯದಲ್ಲಿ ನಿರಾಸಕ್ತಿ ತೋರಿಸಿದ ಕಾರಣ ವರ್ಗಾವಣೆ ಮಾಡಲಾಯಿತು ಎಂದು ಆಯೋಗ ಅಧಿಕಾರಿಗಳು ತಿಳಿಸಿದ್ದರು.
ಬಿಬಿಎಂಪಿ ಆಯುಕ್ತರ ಹುದ್ದೆಗೆ ಕೃಷಿ ಇಲಾಖೆ ಕಾರ್ಯದರ್ಶಿ ಎಂ.ಮಹೇಶ್ವರ ರಾವ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಚುನಾವಣಾಧಿಕಾರಿಯಾಗಿಯೂ ಇವರು ಕಾರ್ಯ ನಿರ್ವಹಿಸಲಿದ್ದಾರೆ. ಚುನಾವಣಾ ಆಯೋಗದ ಸೂಚನೆಯ ಮೇರೆಗೆ ವರ್ಗಾವಣೆ ಮಾಡಲಾಗಿದೆ.