ನವದೆಹಲಿ: ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಹಲವೆಡೆ ಬುಧವಾರ ಹಾಗೂ ಗುರುವಾರ ತಡ ರಾತ್ರಿ ಬೀಸಿದ ದೂಳು ಬಿರುಗಾಳಿ ಮತ್ತು ಭಾರಿ ಮಳೆಗೆ ಇಲ್ಲಿಯವರೆಗೂ 127 ಜನ ಬಲಿಯಾಗಿದ್ದು 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ದೆಹಲಿ ರಾಜ್ಯದ ಕೆಲವು ಭಾಗಗಳಲ್ಲಿ ಬಿರುಗಾಳಿ ಬೀಸಿದೆ. ಪಂಜಾಬ್ ಮತ್ತು ಹರಿಯಾಣ ರಾಜ್ಯದಲ್ಲಿ ಭಾರಿ ಮಳೆಗೂ ಹಲವರು ಮೃತಪಟ್ಟಿದ್ದಾರೆ. ಮಳೆ ಮತ್ತು ಬಿರುಗಾಳಿಗೆ ಸಿಲುಕಿ ಮೃತಪಟ್ಟವರ ಸಂಖ್ಯೆ 127 ದಾಟಿದೆ.
ಮತ್ತೊಂದು ಬಿರುಗಾಳಿಯ ಅಪಾಯ: ಮುಂದಿನ ಎರಡು ದಿನಗಳ ಕಾಲ ಈ ಪ್ರದೇಶಗಳಲ್ಲಿ ಬಾರಿ ಬಿರುಗಾಳಿ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.