ಬೆಂಗಳೂರು: ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ ಅವರು ಗುರುವಾರ ರಾತ್ರಿ ನಿಧನರಾಗಿದ್ದು, ಜಯನಗರದಲ್ಲಿ ಶುಕ್ರವಾರ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.
ಹಾಲಿ ಶಾಸಕರೂ ಆಗಿದ್ದ ಹಾಗೂ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯ್ ಕುಮಾರ್ ಅವರು ಗುರುವಾರ ಚುನಾವಣಾ ಪ್ರಚಾರ ವೇಳೆ ಕುಸಿದು ಬಿದ್ದಿದ್ದರು. ಬಳಿಕ, ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬದುಕುಳಿಯಲಿಲ್ಲ.
ಜಯನಗರದ 4ನೇ ಬ್ಲಾಕ್ನಲ್ಲಿ ಔಷಧ ಅಂಗಡಿಗಳು ಮತ್ತು ಹೋಟೆಲ್ಗಳನ್ನು ಬಿಟ್ಟು ಅಂಗಡಿ, ಮುಂಗಟ್ಟೆಗಳು ಸೇರಿದಂತೆ ಬಹುತೇಕ ಎಲ್ಲಾ ಮಾಲ್, ಮಳಿಗೆಗಳು ಮುಚ್ಚಿವೆ.
ವಿಜಯ್ ಕುಮಾರ್
ವಿಜಯ್ ಕುಮಾರ್ ಅವರ ಮನೆ ಸಮೀಪದ ಬಿಡಿಎ ವಾಣಿಜ್ಯ ಕಟ್ಟಡದ ಎಲ್ಲಾ ಮಳಿಗೆಗಳು ಬಾಗಿಲು ಮುಚ್ಚಿವೆ. ದೊಡ್ಡ ದೊಡ್ಡ ಬಟ್ಟೆ ಅಂಗಡಿ, ಮಾಲ್, ಮೊಬೈಲ್ ಶಾಪ್ಗಳು ಸೇರಿದಂತೆ ಎಲ್ಲಾ ವ್ಯಾಪಾರ ಅಂಗಡಿಗಳು ಬಾಗಿಲು ಹಾಕಿವೆ.
ವ್ಯಾಪಾರ ವಹಿವಾಟಿನ ಮುಖ್ಯ ಸ್ಥಳವಾದ ಈ ಪ್ರದೇಶದಲ್ಲಿ ಸದಾ ಜನರಿಂದ ಕೂಡಿರುತ್ತಿತ್ತು. ನಾಲ್ಕನೇ ಹಂತದ ಸುತ್ತಲಿನ ಒಂದೂವರೆ ಕಿ.ಮೀ. ವರೆಗೆ ಇಂದು ಮಾತ್ರ ಬಂದ್ ವಾತಾವರಣ ನಿರ್ಮಾಣವಾಗಿದ್ದು, ರಸ್ತೆಗಳಲ್ಲಿ ವಾಹನ, ಜನರ ಸಂಚಾರವೂ ವಿರಳವಾಗಿದೆ.