ಪಾಂಡವಪುರ: ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಮಳೆ ಮತ್ತು ಬಿರುಗಾಳಿಯಿಂದಾಗಿ ಮರಗಳು, ತೆಂಗಿನಮರ, ಅಡಿಕೆ ಮರಗಳು ಉರುಳಿವೆ. ಮಳಿಗೆ ಮತ್ತು ಆಲೆಮನೆಗಳ ಚಾವಣಿ ಹಾರಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ರಸ್ತೆಬದಿಯ ಕೆಲ ಮರಗಳು ಉರುಳಿ ವಿದ್ಯುತ್ ತಂತಿಗಳು ತುಂಡಾಗಿವೆ. ಪರಿಣಾಮ ಬುಧವಾರ ಇಡೀ ರಾತ್ರಿ ಮತ್ತು ಗುರುವಾರ ಸಂಜೆವರೆಗೂ ಪಟ್ಟಣದಲ್ಲಿ ವಿದ್ಯುತ್ ಸರಬರಾಜಿಲ್ಲದೆ, ಜನತೆ ತುಂಬ ತೊಂದರೆ ಅನುಭವಿಸಬೇಕಾಯಿತು.
ಸಾರಿಗೆ ಡಿಪೋ ಬಳಿ ಇರುವ ಅಂಗಡಿಮಳಿಗೆ ಚಾವಣಿ ಹಾರಿದ್ದು, ಸಿಮೆಂಟ್ ಹಾಳಾಗಿದೆ. 300 ಬ್ಯಾಗ್ ಸಿಮೆಂಟ್ ಮಳೆಯಲ್ಲಿ ತೊಯ್ದಿದೆ ಎಂದು ಮಾಲೀಕರು ತಿಳಿಸಿದ್ದಾರೆ.
ಚಿಕ್ಕಾಡೆ ಗ್ರಾಮದಲ್ಲಿನ ಸಿ.ಪಿ.ಪ್ರಕಾಶ್ ಅವರಿಗೆ ಸೇರಿದ ಆಲೆಮನೆಯ ಚಾವಣಿ ಶೀಟುಗಳು ಹಾರಿದ್ದು, 1ಟನ್ನಷ್ಟು ಬೆಲ್ಲ ಮಳೆಯಲ್ಲಿ ತೊಯ್ದುಹೋಗಿದೆ. ವಿದ್ಯುತ್ ಕಂಬ ಟ್ರಾನ್ಸ್ಫಾರ್ಮರ್ ಸಮೇತ ಬಿದ್ದುಹೋಗಿದೆ.
ಇದೇ ಗ್ರಾಮದ ಸಿ.ಎನ್.ಕುಮಾರಿ ಅವರಿಗೆ ಸೇರಿದ ತೆಂಗಿನಮರಗಳು ಉರುಳಿವೆ. ಕನಗನಮರಡಿಯಲ್ಲಿ ಚನ್ನೇಗೌಡ ಅರಿಗೆ ಸೇರಿದ ಆಲೆಮನೆಯ ಚಾವಣಿ ಹಾರಿಹೋಗಿದೆ. ತಾಲ್ಲೂಕಿನನ ವಿವಿಧೆಡೆ ಉತ್ತಮ ಮಳೆಯಾಗಿರುವ ವರದಿಗಳು ಬಂದಿವೆ.