ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೆಸಿಬಿ’ ವಿರುದ್ಧ ಜನಾಂದೋಲನ ಮಹಾ ಮೈತ್ರಿ

Last Updated 4 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ (ಜೆಸಿಬಿ) ವಿರುದ್ಧ ಸೆಣಸಾಟಕ್ಕೆ ‘ಜನಾಂದೋಲನಗಳ ಮಹಾಮೈತ್ರಿ’ ಒಕ್ಕೂಟ 20 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಕಾರ್ಮಿಕರು, ರೈತರು ಮತ್ತು ಕೊಳೆಗೇರಿ ಪ್ರದೇಶಗಳ ಜನ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಮಹಾಮೈತ್ರಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಹಾಮೈತ್ರಿಯಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್‌), ಸ್ವರಾಜ್‌ ಇಂಡಿಯಾ, ಆಮ್‌ ಆದ್ಮಿ ಪಕ್ಷ, ವೆಲ್‌ಫೇರ್‌ ಪಾರ್ಟಿ ಆಫ್‌ ಇಂಡಿಯಾ, ಆರ್‌ಪಿಐ (ಪ್ರಕಾಶ್‌ ಅಂಬೇಡ್ಕರ್‌), ಸಿಪಿಐ (ಎಂಎಲ್‌– ರೆಡ್‌ಫ್ಲ್ಯಾಗ್), ರೈತ ಸಂಘಟನೆಗಳು ಮತ್ತು ದಲಿತ ಸಂಘರ್ಷ ಸಮಿತಿಯ ಕೆಲವು ಬಣಗಳಿವೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಎಸ್‌ಯುಸಿಐನ ಜಿ.ಶಶಿಕುಮಾರ್‌, ಗಣಿ ಕಾರ್ಮಿಕರು, ರೈತರು, ಅಂಗನವಾಡಿ ಕಾರ್ಯಕರ್ತೆ
ಯರು, ಕೊಳೆಗೇರಿ ನಿವಾಸಿಗಳ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಾ ಬಂದಿರುವ ಸಂಘಟನೆಗಳು ಒಗ್ಗೂಡಿ ಮಹಾಮೈತ್ರಿಯ ಮೂಲಕ ಚುನಾವಣೆಗೆ ಧುಮುಕಿದ್ದೇವೆ. ‘ಜೆಸಿಬಿ’ ವಿರುದ್ಧ ‌ಪರ್ಯಾಯ ರಾಜಕಾರಣವನ್ನು ಜನರ ಮುಂದಿಡುತ್ತಿದ್ದೇವೆ ಎಂದು ಹೇಳಿದರು.

ಸಂಡೂರಿನಲ್ಲಿ ರಾಮಾಂಜನಪ್ಪ, ಮೇಲುಕೋಟೆಯಲ್ಲಿ ಸ್ವರಾಜ್‌ ಇಂಡಿಯಾದ ದರ್ಶನ್ ಪುಟ್ಟಣ್ಣಯ್ಯ ಪ್ರಬಲವಾಗಿ ಪೈಪೋಟಿ ನೀಡುತ್ತಿದ್ದಾರೆ. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಮಿಕರು, ರೈತರು ಹಲವು ಬಗೆಯ ಸಂಕಷ್ಟಗಳಲ್ಲಿ ಸಿಲುಕಿದ್ದಾರೆ. ಮೂರೂ ರಾಜಕೀಯ ಪಕ್ಷಗಳಿಗೆ ಸೇರಿದ ವ್ಯಕ್ತಿಗಳು ನಿರಂತರವಾಗಿ 10 ವರ್ಷಗಳಿಂದ ಅಕ್ರಮ ಗಣಿಗಾರಿಕೆ ನಡೆಸುತ್ತಾ ಬಂದಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿ ಮಣ್ಣಿನ ದೂಳಿನಿಂದ ಕೃಷಿ ನಾಶವಾಗಿದೆ. ಸಾರ್ವಜನಿಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ವಿಷಯಗಳೇ ಚುನಾವಣಾ ಅಸ್ತ್ರವಾಗಿವೆ ಎಂದರು.

ಈ ಭಾಗದಲ್ಲಿ ಕೆಲಸ ಕಳೆದುಕೊಂಡ ಗಣಿ ಕಾರ್ಮಿಕರು, ಚಾಲಕರು ಮತ್ತು ಕ್ಲೀನರ್‌ಗಳನ್ನು ಸಂಘಟಿಸಿ ಅವರ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸಲು ಹೋರಾಟ ಮಾಡಿದ ರಾಮಾಂಜನಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲಾಗಿದೆ. ಇಲ್ಲಿ ಪ್ರಬಲ ಪಕ್ಷಗಳ ಜೊತೆ ಹಣದಲ್ಲಿ ಪೈಪೋಟಿ ನಡೆಸಲು ಸಾಧ್ಯವಿಲ್ಲ. ಆದರೆ, ಜನಸಂಪರ್ಕದ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದ್ದೇವೆ ಎಂದು ಹೇಳಿದರು.

ಎಸ್‌ಯುಸಿಐನಿಂದ ಶಹಾಬಾದ್‌ ನಲ್ಲಿ ಗಣಪತ್‌ರಾವ್‌ ಮಾನೆ, ಗುರಮಠಕಲ್‌ನಲ್ಲಿ  ಕೆ.ಸೋಮಶೇಖರ್‌, ರಾಜರಾಜೇಶ್ವರಿನಗರ ಕ್ಷೇತ್ರದಿಂದ ಎಚ್‌.ಪಿ.ಶಿವಪ್ರಕಾಶ್‌, ಗೋವಿಂದರಾಜನಗರ ಕ್ಷೇತ್ರದಿಂದ ಡಾ. ಕೆ.ಎಸ್‌.ಗಂಗಾಧರ ಕಣದಲ್ಲಿದ್ದಾರೆ ಎಂದು ಹೇಳಿದರು.

ಎಸ್‌ಯುಸಿಐ ಅಭ್ಯರ್ಥಿಗಳು ಒಂದಲ್ಲ ಒಂದು ಜನಪರ ಹೋರಾಟವನ್ನು ಮುನ್ನಡೆಸಿಕೊಂಡು ಬಂದವರು. ರಾಮಾಂಜನಪ್ಪ ಗಣಿ ಕಾರ್ಮಿಕರ ಹೋರಾಟ, ಗಣಪತ್‌ರಾವ್‌ ಸಿಮೆಂಟ್‌ ಕಾರ್ಖಾನೆಗಳ ಕಾರ್ಮಿಕರು, ಕೆ.ಸೋಮಶೇಖರ್‌ ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕಾಗಿ ಹೋರಾಟ ಮತ್ತು ಎಚ್‌.ಪಿ.ಶಿವಪ್ರಕಾಶ್‌ ರೈತ– ಕೃಷಿ ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಹೋರಾಟ ನಡೆಸಿದ್ದಾರೆ ಎಂದರು.

ಕಾಯಿಲೆ ಕೊಂಪೆ

ಸಂಡೂರು ಕ್ಷೇತ್ರ ಕಾಯಿಲೆಗಳ ಕೊಂಪೆಯಾಗಿದೆ. ಇದಕ್ಕೆ ಗಣಿಧೂಳು ಕಾರಣ. ಕ್ಯಾನ್ಸರ್‌, ಶ್ವಾಸಕೋಶ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿವೆ ಎನ್ನುತ್ತಾರೆ ಎಸ್‌ಯುಸಿಐ ಅಭ್ಯರ್ಥಿ ರಾಮಾಂಜನಪ್ಪ.

ನ್ಯಾಯಾಲಯದ ಆದೇಶದ ಅನ್ವಯ ರಾಜ್ಯ ಸರ್ಕಾರ ₹ 13,000 ಕೋಟಿ ಪುನರ್ವಸತಿ ನಿಧಿಯನ್ನು ಸ್ಥಾಪಿಸಿದ್ದರೂ, ಅದು ಬಳಕೆ ಆಗಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT