ತುಮಕೂರು: ‘ಜೆಡಿಎಸ್ ಮತ್ತು ಕಾಂಗ್ರೆಸ್ನ ಒಳ ಒಪ್ಪಂದದ ಬಗ್ಗೆ ನಾವು ತಿಳಿದುಕೊಳ್ಳಬೇಕಿದೆ. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅವರು ಒಪ್ಪಂದ ಮಾಡಿಕೊಂಡಿರುವುದು ನಮಗೆಲ್ಲ ಗೊತ್ತಿದೆ. ಈ ಚುನಾವಣೆಯಲ್ಲಿನ ಒಳಒಪ್ಪಂದದ ಕುರಿತು ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು’ ಎಂದು ಪ್ರಧಾನಿ ನರೇಂದ್ರಮೋದಿ ಅವರು ಒತ್ತಾಯಿಸಿದರು.
ತುಮಕೂರಿನಲ್ಲಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಅವರು ಮಾತನಾಡಿದರು.
‘ಯಾವುದೇ ಸಮೀಕ್ಷೆಯನ್ನು ನೋಡಿ, ಜೆಡಿಎಸ್ ಮೂರನೇ ಸ್ಥಾನ ಗಳಿಸಲಿದೆ. ಬಿಜೆಪಿಯೇ ಸರ್ಕಾರ ರಚಿಸಲಿದೆ ಎಂಬುದು ತಿಳಿದುಬರುತ್ತದೆ. ಹೀಗಾಗಿಯೇ ರಾಜ್ಯದಲ್ಲಿ ಬಿಜೆಪಿಯೇ ಸರ್ಕಾರ ರಚಿಸಲಿದೆ’ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಮತ್ತೆ ದೇವೇಗೌಡರನ್ನು ಹೊಗಳಿದ ಮೋದಿ: ಉಡುಪಿಯಲ್ಲಿ ಚುನಾವಣಾ ಪ್ರಚಾರದ ಸಂದರ್ಭ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರನ್ನು ಮೋದಿ ಹೊಗಳಿದ್ದರು. ಈಗ ತುಮಕೂರಿನಲ್ಲಿಯೂ ಅದನ್ನು ಪುನರಾವರ್ತಿಸಿದ್ದಾರೆ.
ದೇವೆಗೌಡರು ಭೇಟಿಯಾಗಲು ಬಂದಿದ್ದಾಗ, ‘ನೀವು ಹಿರಿಯರು. ನಿಮ್ಮಂತಹ ಮಹಾನುಭಾವರ ಸೇವೆ ನೂರಾರು ವರ್ಷ ಈ ನಾಡಿಗೆ ಬೇಕು. ಸಾರ್ವಜನಿಕ ಜೀವನದಲ್ಲಿರಬೇಕು’ ಎಂದು ಮನವಿ ಮಾಡಿದ್ದೆ ಎಂದು ಮೋದಿ ಸ್ಮರಿಸಿದರು.