ಬಾಗಲಕೋಟೆ: ಬಾದಾಮಿ ಸಮೀಪದ ಶಿವಯೋಗ ಮಂದಿರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾನಗಲ್ ಕುಮಾರಸ್ವಾಮಿಗಳ ಗದ್ದುಗೆ ದರ್ಶನ ಪಡೆದರು.
ಈ ವೇಳೆ ಶಿವಯೋಗ ಮಂದಿರದ ಅಧ್ಯಕ್ಷ ಡಾ.ಸಂಗನಬಸವ ಸ್ವಾಮಿಗಳು ಇರಲಿಲ್ಲ. ಶ್ರೀಗಳಿಗೆ ಗದಗ ಜಿಲ್ಲೆ ಇಟಗಿಯಲ್ಲಿ ಇಂದು ತುಲಾಭಾರ ಹಮ್ಮಿಕೊಳ್ಳಲಾಗಿದೆ. ಅಲ್ಲಿಗೆ ತೆರಳಿದ್ದಾರೆ. ಭಾನುವಾರ ಬರಲಿದ್ದಾರೆ ಎಂದು ಅವರ ಆಪ್ತ ಸಹಾಯಕರು ಪ್ರಜಾವಾಣಿಗೆ ತಿಳಿಸಿದರು.
ಶಿವಯೋಗ ಮಂದಿರದ ಧರ್ಮದರ್ಶಿ, ಕಾಂಗ್ರೆಸ್ ಮುಖಂಡ ಎಂ.ಬಿ.ಹಂಗರಗಿ ಸಿ.ಎಂ. ಅವರನ್ನು ಸ್ವಾಗತಿಸಿದರು. ಗದ್ದುಗೆಯ ಆರತಿ ತಟ್ಟೆಗೆ ₹೨೦೦೦ ಹಾಕಿದ ಸಿದ್ದರಾಮಯ್ಯ, ವಿಭೂತಿ ಹಚ್ಚಿಕೊಂಡು ಅಲ್ಲಿಯೇ ಇದ್ದ ಮಠದ ವಟುಗಳೊಂದಿಗೆ ಮಾತನಾಡಿದರು.
ಈ ವೇಳೆ ವಟುವೊಬ್ಬರು ಸಿಎಂಗೆ ಮಂದಿರದ ಪರವಾಗಿ ಶಾಲು ಹೊದೆಸಿ ಸನ್ಮಾನಿಸಿದರು. ಈ ವೇಳೆ ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಸಿ.ಎಂ.ಜೊತೆ ಇದ್ದರು.