ಚಿತ್ತಾಪುರ: ‘ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೋಲಿ ಸಮಾಜದವರಿಗೆ ಟಿಕೆಟ್ ಕೊಡುವಂತೆ ಮನವಿ ಮಾಡಿದರೆ ನಿಮ್ಮ ಸಮಾಜವೇನು ಪಾಳೆಗಾರರ ಸಮಾಜವಾ? ಎಂದು ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ್ ಅವರು ಪ್ರಶ್ನಿಸಿದ್ದರು’ ಎಂದು ಭಾಗೋಡಿ ಗ್ರಾಮದ ಕೋಲಿ ಸಮಾಜದ ಯುವ ಮುಖಂಡ ದೇವೀಂದ್ರ ಅರಣಕಲ್ ಆರೋಪಿಸಿದರು.
ತಾಲ್ಲೂಕಿನ ಭಾಗೋಡಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದಲ್ಲಿನ ಕೋಲಿ ಸಮಾಜದ ಕಾರ್ಯಕರ್ತರ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
‘ಮತಕ್ಷೇತ್ರದಲ್ಲಿ ಕೋಲಿ ಸಮಾಜದ ಜನರು ಬಹುಸಂಖ್ಯಾತರು ಇದ್ದಾರೆ. ರಾಜಕೀಯ ಪ್ರಾತಿನಿಧ್ಯ ಕೊಡಬೇಕು ಎಂದು ಕೇಳಿದರೆ ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಕೋಲಿ ಸಮಾಜದ ಬಗ್ಗೆ ನಿರ್ಲಕ್ಷ್ಯ ಭಾವನೆ ಇರುವ ಹೆಬ್ಬಾಳ್ ಅವರಿಗೆ ಚುನಾವಣೆಯಲ್ಲಿ ಮತ ಕೇಳುವ ನೈತಿಕತೆ ಇಲ್ಲ. ಅವರು ಪ್ರಚಾರಕ್ಕೆ ಬಂದಾಗ ಈ ಕುರಿತು ಜನರು ಪ್ರಶ್ನಿಸಬೇಕು’ ಎಂದು ಹೇಳಿದರು.
ಸಮಾಜದ ಹಿರಿಯ ಮುಖಂಡ ಭೀಮಣ್ಣ ಸಾಲಿ, ರಾಜಗೋಪಾಲರೆಡ್ಡಿ ಮುದಿರಾಜ, ಶಂಭುಲಿಂಗ ಗುಂಡಗುರ್ತಿ, ರಮೇಶ ಮರಗೋಳ, ಮುಖಂಡ ಶರಣಗೌಡ ಪಾಟೀಲ್ ಭಾಗೋಡಿ, ತಾಲ್ಲೂಕು ಕೋಲಿ ಸಮಾಜದ ಅಧ್ಯಕ್ಷ ಹಣಮಂತ ಸಂಕನೂರ, ಮುಕ್ತಾರ್ ಪಟೇಲ್, ಜಗದೀಶ ಪಾಟೀಲ್ ಅವರು ಮಾತನಾಡಿದರು.
ರಾಜೇಂದ್ರಪ್ಪ ಅರಣಕಲ್, ಸಿದ್ದು ಸಂಗಾವಿ, ಶೀಲಾ ಕಾಶಿ, ಎಂ.ಎ ರಸೀದ್, ಶಂಕರ ಐನಾಪುರ, ಸಂತೋಷ ನಾಟೀಕಾರ್, ಶರಣು ಡೋಣಗಾಂವ, ಮಲ್ಲಿಕಾರ್ಜುನ ಡಾಂಗೆ, ಭೀಮರಾಯ ನಾಟಿಕಾರ್, ಮಲ್ಲಿಕಾರ್ಜುನ ದೊಡ್ಡಮನಿ, ಮಲ್ಲಿಕಾರ್ಜುನ ಕುದರಿಇದ್ದರು.
ಭಾಗೋಡಿ, ಮುಡಬೂಳ, ಇವಣಿ, ಮಲಕೂಡ, ಬೆಳಗುಂಪಾ, ಕಾಟಮ್ಮದೇವರಹಳ್ಳಿ, ಗುಂಡಗುರ್ತಿ, ಕೋರವಾರ, ಇಂಧನಕಲ್, ಮುಚಖೇಡ್, ಮತ್ತಿಮಡು, ಹದ ನೂರ, ವಚ್ಚಾ, ಪೇಠಶಿರೂರ, ತೊನಸನಹಳ್ಳಿ (ಟಿ), ಕದ್ದರಗಿ, ಮರಗೋಳ, ಕೋಲಿ ಸಮಾಜದ ಕಾರ್ಯಕರ್ತರು ಭಾಗವಹಿಸಿದ್ದರು. ದೇವಿಂದ್ರ ನಾಟಿಕಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
**
ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ್ ಅವರು ತಮ್ಮ ಅಧಿಕಾರವಧಿಯಲ್ಲಿ ಕೋಲಿ ಸಮಾಜದ ಎಷ್ಟು ಜನರಿಗೆ ತಾ.ಪಂ, ಜಿ.ಪಂ ಸದಸ್ಯರಾಗಿ ಮಾಡಿದ್ದಾರೆ. ಅಧಿಕಾರ ನೀಡಿದ್ದಾರೆ
– ಭೀಮಣ್ಣ ಸಾಲಿ, ಕೋಲಿ ಸಮಾಜದ ಹಿರಿಯ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.