ಮಡಿಕೇರಿ: ಇಲ್ಲಿನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎ. ಜೀವಿಜಯ ಅವರು ಶುಕ್ರವಾರ ತೆರೆದ ವಾಹನದಲ್ಲಿ ರೋಡ್ ಷೋ ಮೂಲಕ ಮತಯಾಚಿಸಿದರು.
ಸುದರ್ಶನ ವೃತ್ತದಿಂದ ಹೊರಟ ಮೆರವಣಿಗೆ ಜನರಲ್ ತಿಮ್ಮಯ್ಯ ವೃತ್ತ, ಖಾಸಗಿ ಬಸ್ ನಿಲ್ದಾಣ, ಚೌಕಿ ಮೂಲಕ ಮಹದೇವಪೇಟೆ ತಲುಪಿತು.
ಟ್ರಾಫಿಕ್ ಸಮಸ್ಯೆ ಕಂಡು ಬಂದಿತು. ಆಗ ಪೊಲೀಸರು ಹಾಗೂ ವಾಹನ ಸವಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಜೀವಿಜಯ ಮಾತನಾಡಿ, ‘ರಾಜ್ಯದ ಜನರು ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ ನೀಡಬೇಕು ಎಂದು ನಿರ್ಧಾರ ಮಾಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ನಿಶ್ಚಿತ. ಅದೃಷ್ಟ ಪರೀಕ್ಷೆಗೆ ನಾನು ಸ್ಪರ್ಧೆಗೆ ನಿಂತಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರನ್ನು ಸೋಲಿಸಲು ಹೋರಾಟ ನಡೆಸುತ್ತಿದ್ದೇನೆ. ಇದಕ್ಕೆ ಮತದಾರರು ಸಹಕರಿಸಬೇಕು’ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಲ್ಲಿರುವ ಸಾಕಷ್ಟು ಮುಖಂಡರು ಇಂದು ಜೆಡಿಎಸ್ನತ್ತ ಮುಖ ಮಾಡಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್, ನಗರ ಘಟಕದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸಾಕ್, ಮುಖಂಡರಾದ ರಾಜರಾಂ, ಮನ್ಸೂರ್ ಆಲಿ, ಶಿವದಾಸ್, ರವಿಕಿರಣ್ ಹಾಜರಿದ್ದರು.
**
ಅದೃಷ್ಟ ಪರೀಕ್ಷೆಗೆ ನಾನು ಸ್ಪರ್ಧೆಗೆ ನಿಂತಿಲ್ಲ. ಕೊಡಗಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರನ್ನು ಸೋಲಿಸಲು ಹೋರಾಟ ನಡೆಸುತ್ತಿದ್ದೇನೆ – ಬಿ.ಎ. ಜೀವಿಜಯ, ಜೆಡಿಎಸ್ ಅಭ್ಯರ್ಥಿ, ಮಡಿಕೇರಿ ಕ್ಷೇತ್ರ