ಬೆಳಗಾವಿ: ‘ಗ್ರಾಮೀಣ ಕ್ಷೇತ್ರ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಇಲ್ಲಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಬೆಳಗಾವಿ ನಗರದ ಮಾದರಿಯಲ್ಲಿ ವಿಶೇಷ ಅನುದಾನ ತರುವ ಸಂಕಲ್ಪ ಮಾಡಿದ್ದೇನೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದರು.
ಕ್ಷೇತ್ರದ ಬಿಜಗರ್ಣಿ ಗ್ರಾಮದಲ್ಲಿ ಶನಿವಾರ ಪಾದಯಾತ್ರೆ ನಡೆಸಿದ ನಂತರ, ಮತದಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಅತ್ಯಂತ ವಿಶಾಲವಾಗಿರುವ ಈ ಕ್ಷೇತ್ರದ ಅಭಿವೃದ್ಧಿಗೆ ದೊಡ್ಡ ಯೋಜನೆ ರೂಪಿಸಿದ್ದೇನೆ. ಮತದಾರರು ಇದಕ್ಕಾಗಿ ಆಶೀರ್ವದಿಸಬೇಕು. ಸೇವೆಗೆ ಅವಕಾಶ ಕೊಡಬೇಕು’ ಎಂದು ಕೋರಿದರು.
‘ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ. ನಿಮ್ಮ ಸೇವಾ ಪ್ರತಿನಿಧಿಯಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.
ಮುಖಂಡ ಮನೋಹರ ಬೆಳಗಾಂವಕರ ಮಾತನಾಡಿ, ‘ಅಧಿಕಾರ ಇಲ್ಲದಿದ್ದರೂ ಬಿಜಗರ್ಣಿ ಗ್ರಾಮದಲ್ಲಿ ಕೊಳವೆಬಾವಿ ಕೊರೆಸಿ 24 ಗಂಟೆಯೂ ನೀರು ಸಿಗುವಂತೆ ಮಾಡಿದ್ದಾರೆ. ಗ್ರಾಮಸ್ಥರ ಕಷ್ಟ–ಸುಖಗಳಿಗೆ ಸ್ಪಂದಿಸಿದ್ದಾರೆ’ ಎಂದರು.
ಲಕ್ಷ್ಮಿ ಗೆಲುವಿಗಾಗಿ ಅನೇಕರು ಹರಕೆ ಹೊತ್ತಿದ್ದಾರೆ. ತಾರಿಹಾಳದ ಯುವಕ ‘ಜೈ ಹೋ ಲಕ್ಷ್ಮಿ ಅಕ್ಕ’ ಎಂದು ಕೇಶವಿನ್ಯಾಸ ಮಾಡಿಸಿಕೊಂಡು ಅಭಿಮಾನ ಮೆರೆದಿದ್ದಾರೆ.