ಮುರ್ಡೇಶ್ವರ (ಭಟ್ಕಳ): ‘ರಾಷ್ಟ್ರವಿರೋಧಿಗಳಿಗೆ ತಕ್ಕ ಪಾಠ ಕಲಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.
ಮುರ್ಡೇಶ್ವರದಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಪರ ಮತ ಯಾಚನೆ ಮಾಡಿ ಅವರು ಮಾತನಾಡಿದರು.
‘ಈ ಬಾರಿಯ ಚುನಾವಣೆಯಲ್ಲಿ ಜಿಹಾದಿಗಳಿಗೆ, ರಾಷ್ಟ್ರ ವಿರೋಧಿಗಳಿಗೆ ಮತದಾರರು ತಕ್ಕ ಪಾಠ ಕಲಿಸಬೇಕು. ಭಟ್ಕಳದ ಹೆಸರು ಕೇಳಿದರೆ ಭಯವಾಗುತ್ತದೆ’ ಎಂದು ವಿಷಾದಿಸಿದರು.
‘ಇಂಥ ಭಯದ ವಾತಾವರಣ ತೊಲಗಬೇಕು. ಕರ್ನಾಟಕ ರಾಮರಾಜ್ಯ ಆಗಬೇಕು. ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಗಳಾಗಿವೆ. ಜಿಹಾದಿಗಳಿಂದ ಅಮಾಯಕರ ಹತ್ಯೆಯಾಗಿದೆ’ ಎಂದು ಆರೋಪಿಸಿದರು.
‘ಪ್ರಧಾನಮಂತ್ರಿ ನರೇಂದ್ರ ಮೋದಿ ಹಲವು ಉತ್ತಮ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಅದರೆ ರಾಜ್ಯ ಸರ್ಕಾರ ಅವುಗಳ ಅನುಷ್ಠಾನಕ್ಕೆ ಗಮನ ಕೊಡುತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಗೌಪ್ಯ ಅಜೆಂಡಾಗಳು ಇರುವ ಕಾರಣ ರಾಜ್ಯ ಅಭಿವೃದ್ಧಿಯಾಗುತ್ತಲ್ಲ’ ಎಂದು ಆರೋಪಿಸಿದರು.
‘ಛತ್ರಪತಿ ಶಿವಾಜಿ ಜಯಂತಿ ಮಾಡಲು ಹಿಂಜರಿಯುವ ಸಿದ್ದರಾಮಯ್ಯ ಸರ್ಕಾರ ಟಿಪ್ಪು ಜಯಂತಿ ಮಾಡುತ್ತಿದೆ’ ಎಂದು ಟೀಕಿಸಿದರು.