ಬೆಂಗಳೂರು: ‘ರಾಜ್ಯ ವಿಧಾನಸಭೆಗೆ ಇದೇ 12ರಂದು ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು ಖಾಸಗಿ ಕಂಪನಿ, ಸಂಸ್ಥೆಗಳ ನೌಕರರು ಮತ್ತು ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು’ ಎಂದು ಕಾರ್ಮಿಕ ಇಲಾಖೆ ಸೂಚಿಸಿದೆ.
‘ಕಾರ್ಮಿಕರಿಗೆ ಅಂದು ವೇತನ ಸಹಿತ ರಜೆ ನೀಡಬೇಕು. ಅವರ ಮೂಲಭೂತ ಹಕ್ಕು ಚಲಾಯಿಸಲು ಅನುವು ಮಾಡಿಕೊಡಬೇಕು. ನಿರಂತರ ಉತ್ಪಾದನೆಯಲ್ಲಿ ತೊಡಗುವುದು ಅನಿವಾರ್ಯ ಎಂದು ಕಂಡು ಬಂದಲ್ಲಿ ಪರ್ಯಾಯ ವ್ಯವಸ್ಥೆ ರೂಪಿಸಿಕೊಂಡು ಅಂತಹ ಉತ್ಪಾದನೆಗೆ ಸಂಬಂಧಪಟ್ಟ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಸಾಕಷ್ಟು ಕಾಲಾವಕಾಶ ಮಾಡಿಕೊಡಬೇಕು’ ಎಂದು ಇಲಾಖೆ ತಿಳಿಸಿದೆ.
‘ಎಲ್ಲಾ ಪಾಳಿಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರು, ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡುವ ಬಗ್ಗೆ ಕಾರ್ಮಿಕ ಇಲಾಖೆ ಆಯುಕ್ತರು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಈಗಾಗಲೇ ಆದೇಶಿಸಿದ್ದಾರೆ.