ಸುರತ್ಕಲ್ : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಬೆಂಗರೆ ಎಂಬ ಊರು ಸುತ್ತಲೂ ನೀರು ಆವರಿಸಿ ಭೌಗೋಳಿಕವಾಗಿ ಸುಂದರವಾಗಿದ್ದರೂ ಇಲ್ಲಿನ ಜನರ ಬದುಕು ಮಾತ್ರ ದುಸ್ಥರವಾಗಿದೆ. ಇಲ್ಲಿನ ಜನರಿಗೆ ಕುಡಿಯುವ ನೀರಿಲ್ಲ, ಸಂಚಾರಕ್ಕೆ ಯೋಗ್ಯ ರಸ್ತೆಗಳಿಲ್ಲ, ಮನೆಗಳಿಗೆ ಹಕ್ಕುಪತ್ರಗಳಿಲ್ಲ, ಮೂಲ ಸೌಕರ್ಯವಂತೂ ಇಲ್ಲವೇ ಇಲ್ಲ, ಹೀಗಿದ್ದರೂ ಇದರ ಬಗ್ಗೆ ಯಾರೂ ಗಂಭೀರಗಿ ಯೋಚನೆಯನ್ನೂ ನಡೆಸುತ್ತಿಲ್ಲ ಇದೇ ಪರಿಸ್ಥಿತಿ ಮುಂದುವರಿದರೆ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾದಿತು ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ತಿಳಿಸಿದರು.
ಬೆಂಗರೆ ಪ್ರದೇಶದ ಮುಖ್ಯ ರಸ್ತೆ ಮತ್ತು ಎಲ್ಲಾ ಒಳ ರಸ್ತೆಗಳ ಡಾಮರೀಕರಣಕ್ಕೆ ಒತ್ತಾಯಿಸಿ ಡಿವೈಎಫ್ಐ ವತಿಯಿಂದ ಬೆಂಗರೆಯಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. ಅಲ್ಪ ಸಂಖ್ಯಾತರು, ಬಡವರು, ಕೂಲಿ ಕಾರ್ಮಿಕರು ಹೆಚ್ಚಾಗಿರುವ ಈ ಪ್ರದೇಶವನ್ನು ಪಾಲಿಕೆ ಕಡೆಗಣಿಸಿದೆ, ರಸ್ತೆ ದುರಸ್ಥಿ ಬಗ್ಗೆ ಮನವಿ ಸ್ವೀಕರಿಸಲು ಅಧಿಕಾರಿಗಳನ್ನು ಕಳುಹಿಸಿ ಎಂದಾಗ ಇದು ನಮ್ಮ ವ್ಯಾಪ್ತಿಗೆ ಒಳ ಪಡುವುದಿಲ್ಲ ಬಂದರು ಇಲಾಖೆಗೆ ಸಂಬಂಧಿಸಿದ್ದು ಎಂದು ನುಣುಚಿಕೊಳ್ಳುತ್ತಿದ್ದಾರೆ. ಏನೇ ಆದರೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ, ಸಮಸ್ಯೆ ಆಲಿಸಬೇಕಾದ ಜನಪ್ರತಿನಿಧಿಗಳು ನಾಪತ್ತೆಯಾಗಿದ್ದಾರೆ ಇವರಿಗೆ ಮುಂದಿನ ದಿನದಲ್ಲಿ ಪಾಠ ಕಲಿಸುವುದಾಗಿ ತಿಳಿಸಿದರು. ಸ್ಥಳಕ್ಕೆ ಸುರತ್ಕಲ್ ವಲಯ ಆಯುಕ್ತ ರವಿ ಕುಮಾರ್ ಆಗಮಿಸಿ ಮನವಿ ಸ್ವೀಕರಿಸಿ ತಾತ್ಕಾಲಿಕವಾಗಿ ರಸ್ತೆ ದುರಸ್ಥಿ ನಡೆಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆ ಹಿಂದೆಗೆದುಕೊಳ್ಳಲಾಯಿತು.
ಬೆಳಾಲು ಶ್ರೀ ಧ.ಮ. ಪ್ರೌಢಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ ಆರಂಭ
ಬೆಳ್ತಂಗಡಿ : ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ನ ವತಿಯಿಂದ ಇಂಟರ್ಯಾಕ್ಟ್ ಕ್ಲಬ್ ಈಚೆಗೆ ಆರಂಭವಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಜಗದೀಶ್ ಪ್ರಸಾದ್ ಕ್ಲಬ್ನ ಕುರಿತಾಗಿ ಮಾಹಿತಿಯನ್ನು ನೀಡಿದರು. ಜೊತೆಗೆ ಇಂಟರ್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿದ್ಯಾರ್ಥಿ ತ್ರಿಲೋಚನ ಜೈನ್, ಕಾರ್ಯದರ್ಶಿಯಾಗಿ ಆಯ್ಕೆ ಆಗಿರುವ ರಮೀಝಾ ಭಾನುರವರಿಗೆ ಕ್ಲಬ್ನ ಬ್ಯಾಜ್ ಮತ್ತು ನಿರ್ಣಯ ಪುಸ್ತಕವನ್ನು ನೀಡಿ ಅಧಿಕಾರ ಹಸ್ತಾಂತರಿಸುವುದರ ಜೊತೆಗೆ ಕ್ಲಬ್ನ ಗೌಪ್ಯತೆಯ ವಚನವನ್ನು ಬೋಧಿಸಿದರು.
ಅತಿಥಿ ಶಾಲಾ ಪೋಷಕ ಸಂಘದ ಅಧ್ಯಕ್ಷ ಶೇಖರ್ ಕೊಲ್ಲಿಮಾರ್ ಶಾಲಾ ಮುಖ್ಯಶಿಕ್ಷಕ ರಾಮಕೃಷ್ಣ ಭಟ್, ಕ್ಲಬ್ನ ಮಾರ್ಗದರ್ಶಿ ಶಿಕ್ಷಕ ಕೃಷ್ಣಾನಂದ , ಶಿಕ್ಷಕಿ ವಾರಿಜ ಎಸ್. ಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.