ಬೆಂಗಳೂರು: ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರ ಪುತ್ರಿ ಅಕ್ರಮವಾಗಿ ಹಣ ಹಂಚುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲ ಸುದ್ದಿ ವಾಹಿನಿಗಳಲ್ಲಿ ಹರಿದಾಡಿತ್ತು. ಇದು ಸುಳ್ಳು ಸುದ್ದಿ ಎಂದು ಸುರೇಶ್ ಕುಮಾರ್ ಫೇಸ್ಬುಕ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಸುರೇಶ್ ಕುಮಾರ್ ಅವರ ಮಗಳು ದಿಶಾ ಎಸ್. ಕುಮಾರ್ ಮತದಾರರಿಗೆ ಆಕ್ರಮವಾಗಿ ಹಣ ಹಂಚುತ್ತಿದ್ದರು ಎಂದು ಕೆಲವರು ವಾಟ್ಸ್ಆ್ಯಪ್ ಮತ್ತು ಫೇಸ್ಬುಕ್ನಲ್ಲಿ ಸಂದೇಶ ರವಾನಿಸುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿ ಸ್ಟೇಟಸ್ ಹಾಗೂ ವಿಡಿಯೊ ಹಾಕಿದ್ದಾರೆ.
ಸುರೇಶ್ ಕುಮಾರ್ ಸ್ಟೇಟಸ್ ಈ ರೀತಿ ಇದೆ: ರಾಜಾಜಿನಗರದಲ್ಲಿ ಬಿಜೆಪಿ ವತಿಯಿಂದ, ಅದರಲ್ಲೂ ನನ್ನ ಮಗಳ ಕಡೆಯಿಂದ ಚುನಾವಣಾ ಸಂಬಂಧ ಹಣ ಹಂಚುವಿಕೆ ಆಗುತ್ತಿರುವಾಗ, ನನ್ನ ಮಗಳನ್ನು ಪೋಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆಯೆಂಬ ಸುದ್ಧಿ ಅಪ್ಪಟ ಸುಳ್ಳು ಸುದ್ಧಿ.
ಯಾವುದೇ ರೀತಿಯ ಹಣ ಹಂಚುವಿಕೆ ನಾವು ಮಾಡಿಲ್ಲ. ಮಾಡುವುದಿಲ್ಲ.
ಸೋಷಿಯಲ್ ಮೀಡಿಯಾ ತಂಡದ ಜೊತೆ ನನ್ನ ಮಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾಳಷ್ಟೇ. ನಮ್ಮ ಸೋಷಿಯಲ್ ಮೀಡಿಯಾ ತಂಡದ ಜೊತೆ ನಮ್ಮ ಪಕ್ಷದ ಯುವ ಮೋರ್ಚಾ ಪದಾಧಿಕಾರಿ ಯಶಸ್ ರವರ ಕಚೇರಿಯಲ್ಲಿ ಚರ್ಚಿಸುತ್ತಿದ್ದಳು.
ಯಾವುದೇ ರೀತಿಯ ಅಕ್ರಮ ಕಾರ್ಯದಲ್ಲಿ ನನ್ನ ಮಗಳು, ನನ್ನ ಪಕ್ಷ ಭಾಗಿಯಾಗಿಲ್ಲವೆಂದು ಸ್ಪಷ್ಟಗೊಳಿಸುತ್ತಿದ್ದೇನೆ. ಚುನಾವಣೆ ದಿನಾಂಕ ಹತ್ತಿರ ಬರುವಂತೆ ಈ ರೀತಿಯ ಸುದ್ಧಿಗಳು ಇನ್ನಷ್ಟು ಹೆಚ್ಚಾಗುತ್ತವೆ ಎಂದು ಬರೆದುಕೊಂಡಿದ್ದಾರೆ.