ಸಿಂಧನೂರು: ಜೆಡಿಎಸ್ ಮುಖಂಡ ಬಿ.ಹರ್ಷ ಅವರ ನಿವಾಸದ ಮೇಲೆ ಚುನಾವಣಾ ವಿಚಕ್ಷಣದಳ ದಾಳಿ ಮಾಡಿರುವುದನ್ನು ತಮ್ಮ ತಲೆಗೆ ಕಟ್ಟುವ ಯತ್ನವನ್ನು ಜೆಡಿಎಸ್ ಅಭ್ಯರ್ಥಿ ವೆಂಕಟರಾವ್ ನಾಡಗೌಡ ಮಾಡಿದ್ದಾರೆ. ಅಂತಹ ಕ್ಷುಲ್ಲಕ ಕೆಲಸವನ್ನು 30 ವರ್ಷದ ರಾಜಕೀಯ ಇತಿಹಾಸದಲ್ಲಿ ಮಾಡಿಲ್ಲ. ಮುಂದೆಯು ಮಾಡುವುದಿಲ್ಲ’ ಎಂದು ಶಾಸಕ ಹಂಪನಗೌಡ ಬಾದರ್ಲಿ ಸ್ಪಷ್ಟೀಕರಣ ನೀಡಿದರು.
ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ದಾಳಿ ಮಾಡಿದ ಎರಡೇ ನಿಮಿಷದಲ್ಲಿ ಜೆಡಿಎಸ್ ಮುಖಂಡನ ಮನೆಯ ಮೇಲೆ ದಾಳಿ ಮಾಡಿಸಿರುವ ಕೃತ್ಯ ಖಂಡಿಸುವ ಹೇಳಿಕೆಗಳು ವಾಟ್ಸ್ ಆ್ಯಫ್, ಫೇಸ್ಬುಕ್ಗಳಲ್ಲಿ ಹರಿಬಿಡಲಾಗಿತ್ತು. ಈ ಸಂಗತಿಯನ್ನು ಗಮನಿಸಿದರೆ ವೆಂಕಟರಾವ್ ನಾಡಗೌಡ ದುರುದ್ದೇಶದಿಂದ ತಮ್ಮ ಕಾರ್ಯಕರ್ತರಿಂದಲೇ ಮಾಹಿತಿ ನೀಡಿ ದಾಳಿ ಮಾಡಿಸುವ ಮೂಲಕ ಚುನಾಣೆಯಲ್ಲಿ ತಮ್ಮ ವಿರುದ್ಧ ಪಿತೂರಿ ಮಾಡಿದ್ದಾರೆ. ಇಂತಹ ಹೀನ ಕೃತ್ಯದಿಂದ ಚುನಾವಣೆ ಲಾಭ ಪಡೆಯುವ ಪ್ರಯತ್ನ ಅವರ ಘನತೆಗೆ ಶೋಭೆಯಲ್ಲ. ಸೋಲುವ ಭಯದಿಂದ ನಾಡಗೌಡ ಈ ನಾಟಕ ನಡೆಸಿದ್ದಾರೆ’ ಎಂದು ಆರೋಪಿಸಿದರು.
ಸದಾ ಇಂತಹ ಚಟುವಟಿಕೆ ಗಳಿಂದಲೇ ಜನರನ್ನು ದಿಕ್ಕು ತಪ್ಪಿಸುವ ಅವರಿಗೆ ಮತದಾರರು ಒಲಿಯಲು ಸಾಧ್ಯವಿಲ್ಲ. ಕರ್ನಾಟಕ ಮುಸ್ಲಿಂ ಮುತಹಿದ ಮಹಾಜ್ ಸಂಘಟನೆ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಅಲ್ಪಸಂಖ್ಯಾತ ಬಾಂಧವರಿಗೆ ಸೂಚನೆ ನೀಡಿರುವ ಪತ್ರವನ್ನು ತೆಗೆದುಕೊಂಡು ಮತ್ತೊಂದು ಖೊಟ್ಟಿ ಪತ್ರ ಸೃಷ್ಠಿಸಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಿದೆ ಎಂದು ಮತದಾರರಿಗೆ ಪತ್ರಗಳನ್ನು ನೀಡಿರುವುದು ಸಹ ಅಷ್ಟೆ ಸಣ್ಣತನದ ವರ್ತನೆಯಾಗಿದೆ ಎಂದು ದೂರಿದರು.
ಇದೇ ರೀತಿ ಎಂಎಸ್ಡಿಪಿ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಮಂಜೂರಾದ ಹಣ ಶಾಸಕರ ನಿರ್ಲಕ್ಷತೆಯಿಂದ ಮರಳಿ ಸರ್ಕಾರಕ್ಕೆ ಹೋಗಿದೆ ಎಂದು ಜನರಲ್ಲಿ ಅಪಪ್ರಚಾರ ಮಾಡಿದ್ದಾರೆ. ಈ ಯೋಜನೆಯ ಅಡಿಯಲ್ಲಿ 20 ಕೋಟಿ ವೆಚ್ಚದಲ್ಲಿ ನವೋದಯ ಮಾದರಿಯ ಶಾಲೆ, 20 ಕೋಟಿ ವೆಚ್ಚದಲ್ಲಿ ಮೊರಾರ್ಜಿ ವಸತಿ ಶಾಲೆ ಮತ್ತು ಜೂನಿಯರ್ ಕಾಲೇಜು, 75 ಲಕ್ಷದಲ್ಲಿ 3 ವಸತಿ ಶಾಲೆ, 3.5 ಕೋಟಿ ವೆಚ್ಚದಲ್ಲಿ 5 ವಾರ್ಡುಗಳಿಗೆ ಮೂಲಸೌಕರ್ಯ, 1.60 ಕೋಟಿ ವೆಚ್ಚದಲ್ಲಿ ಅಲ್ಪಸಂಖ್ಯಾತ ಕಸ್ತೂರ ಬಾ ಬಾಲಕಿಯರ ಶಾಲೆ, ಅಲ್ಪಸಂಖ್ಯಾತ ಮಹಿಳಾ ಸ್ವಸಹಾಯ ಸಂಘಕ್ಕೆ 52 ಲಕ್ಷ ಮತ್ತು ಅಲ್ಪಸಂಖ್ಯಾತ ಸಮಗ್ರ ಅಭಿವೃದ್ದಿಗೆ 97 ಲಕ್ಷ ಕಾಮಗಾರಿಗಳು ಪ್ರಗತಿಯಲ್ಲಿರುವುದು ಎಲ್ಲರಿಗೂ ಗೊತ್ತಿದೆ. ಆದಾಗ್ಯೂ ದಾರಿ ತಪ್ಪಿಸುವ ಯತ್ನದಲ್ಲಿ ನಾಡಗೌಡ ತೊಡಗಿದ್ದಾರೆ ಎಂದು ದೂರಿದರು.
ಮುಖಂಡ ಬಾಬರಪಾಷ ವಕೀಲ ಮಾತನಾಡಿ, ಜಮಾತೇ ಇಸ್ಲಾಮಿ ಹಿಂದ್, ಪಬ್ಲಿಕ್ ಜಮಾತ್, ಸುನ್ನಿ ಜಮಾತ್, ಸುನ್ನಿ ಉಲ್ಮಾ ಬೋಲ್ಡ್ ಲೈನಾತುಲ್ ಉಲ್ಮಾ, ಜಮೀಲತ್ ಅಹಲ್ ಇತರ 20 ಸಂಘಟನೆಗಳು ಸೇರಿ ಮತ್ಹಿದ್ ಮಾಹಾಜ್ (ಒಕ್ಕೂಟ) ರಚಿಸಿಕೊಂಡಿದ್ದು ಆ ಸಂಘಟನೆಯಿಂದ ರಾಯಚೂರು ಜಿಲ್ಲೆಯ ಎಲ್ಲ 7 ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ತಿಳಿಸಲಾಗಿದೆ. ಅಲ್ಪಸಂಖ್ಯಾತ ಬಂಧು ಗಳು ಯಾವುದೇ ರೀತಿಯ ಮಾಹಿತಿಗೆ ಕಿವಿಗೊಡಬಾರದು ಎಂದರು.
ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಎಂ.ಕಾಳಿಂಗಪ್ಪ ವಕೀಲ, ನಗರಸಭೆ ಮಾಜಿ ಅಧ್ಯಕ್ಷ ಸೈಯದ್ ಜಾಫರ್ ಅಲಿ ಜಾಗೀರದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲ್ಲಿಕ್ ವಕೀಲ, ಬಾಬರಪಟೇಲ, ಸಂಜಯ ಪಾಟೀಲ, ಹಂಪಯ್ಯ ರಾವಿಹಾಳ, ಅಮರೇಶ ಕುಂಬಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.