ಮೈಸೂರು: ಬಾಡಿ ಬಿಲ್ಡರ್ಗಳು, ಪೈಲ್ವಾನರಿಗೂ 56 ಇಂಚಿನ ಎದೆ ಇರುತ್ತದೆ. ಅದರಲ್ಲಿ ವಿಶೇಷ ಏನಿದೆ? ಆ ಎದೆಯಲ್ಲಿ ಬಡವರಿಗಾಗಿ ಮಿಡಿಯುವ ಹೃದಯ ಇರಬೇಕಷ್ಟೆ. ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಅಂತಹ ಹೃದಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಟೀಕಿಸಿದರು.
ಚಾಮರಾಜ ಕ್ಷೇತ್ರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಮುಧೋಳ ನಾಯಿಗೆ ಇರುವ ನಿಯತ್ತು ಕಾಂಗ್ರೆಸ್ನವರಿಗೆ ಇಲ್ಲ ಎಂದು ಮೋದಿ ಹೇಳುತ್ತಾರೆ. ತಮ್ಮನ್ನು ರಾಜಕೀಯವಾಗಿ ಬೆಳೆಸಿದ ಅಡ್ವಾಣಿ ಅವರನ್ನೇ ಮೂಲೆಗುಂಪು ಮಾಡಿದವರಿಂದ ನಾವು ನಿಯತ್ತಿನ ಪಾಠ ಕಲಿಯಬೇಕೇ?’ ಎಂದರು.
‘ಅನಂತಕುಮಾರ ಹೆಗಡೆ ದಲಿತರನ್ನು ನಾಯಿ ಎಂದು ಕರೆಯುತ್ತಾನೆ. ಆತ ಮುನ್ಸಿಪಾಲಿಟಿ ಸದಸ್ಯನಾಗಲೂ ಅನರ್ಹ. ಆತನ ನಾಲಿಗೆಯಲ್ಲಿ ಚರಂಡಿ ನೀರು ಹರಿಯುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.
‘ಮನ್ ಕೀ ಬಾತ್’ನಿಂದ ಹೊಟ್ಟೆ ತುಂಬುತ್ತದೇನ್ರೀ? ಬಡವರ ಹೊಟ್ಟೆ ತುಂಬಿಸಲು, ರೈತರ ಸಂಕಷ್ಟ, ನಿರುದ್ಯೋಗ ಸಮಸ್ಯೆ ಬಗೆಹರಿಸಲು ಮಾರ್ಗ ಕಂಡುಕೊಳ್ಳಬೇಕೇ ಹೊರತು ‘ಮನ್ ಕೀ ಬಾತ್’ ಮಾಡುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
* ಮೋದಿ ಅವರಂತಹ ಮಹಾನ್ ಸುಳ್ಳುಗಾರ ಪ್ರಧಾನಿಯನ್ನು ಈ ದೇಶ ಕಂಡಿಲ್ಲ. ಅವರು ಹೇಳಿದ್ದು ಒಂದಾದರೂ ನಡೆಯುತ್ತಾ?