ಲಖನೌ: ಉತ್ತರಪ್ರದೇಶ ಸರ್ಕಾರ ನಡೆಸುತ್ತಿರುವ ಬಹುತೇಕ ಎನ್ಕೌಂಟರ್ಗಳು ನಕಲಿ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಟೀಕಾಪ್ರಹಾರ ನಡೆಸಿದ್ದು, ಪೊಲೀಸ್ ವ್ಯವಸ್ಥೆಯನ್ನು ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ರಾಜ್ಯದ ಜನರಿಗೆ ಚಿತ್ರಹಿಂಸೆ ಹಾಗೂ ಭಯದ ವಾತಾವರಣವನ್ನು ಸರ್ಕಾರ ಮೂಡಿಸುತ್ತಿದೆ ಎಂದು ಹೇಳಿದ ಅಖಿಲೇಶ್, ನಾವು ಮಾತ್ರ ಇದರ ಬಗ್ಗೆ ದನಿ ಎತ್ತುತ್ತಿಲ್ಲ. ರಾಜ್ಯದಲ್ಲಿರುವ ಎಲ್ಲ ವಿರೋಧ ಪಕ್ಷಗಳ ಸಹ ಮಾತನಾಡುತ್ತಿವೆ ಎಂದರು.
ಎನ್ಕೌಂಟರ್ನಿಂದ ಹತ್ಯೆಯಾದವರು ಕುಖ್ಯಾತರಾಗಿದ್ದರು ಎಂಬ ಸರ್ಕಾರದ ಸಮರ್ಥನೆಗೆ ಕಿಡಿಕಾರಿದ ಅವರು, ಪೊಲೀಸರಿಗೆ ಬೇಕಾಗಿದ್ದ (ಬಹುಮಾನ ಘೋಷಣೆಯಾದ) ಅಪರಾಧಿಗಳ ಪಟ್ಟಿಯನ್ನಾದರೂ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕಸ್ಟಡಿಯಲ್ಲಿದ್ದಾಗಲೇ ಮೀರತ್ ಪೊಲೀಸರ ಹಿಂಸೆಯಿಂದ ಸಾವನ್ನಪ್ಪಿದ ನರೇಂದ್ರ ಗುಜ್ಜರ್ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಅಖಿಲೇಶ್, ಆತನ ವಿರುದ್ಧ ನಕಲಿ ದನ ಸಾಗಣೆ ದೂರು ದಾಖಲು ಮಾಡಿಕೊಳ್ಳಲಾಗಿತ್ತು ಎಂದು ಆರೋಪಿಸಿದರು.