ಚಂಡೀಗಡ, ಮೇ 10– ಪಂಜಾಬಿನ ಎರಡು ಧನವಿನಿಯೋಗ (1968) ಶಾಸನಗಳು (ಬಜೆಟ್) ಸಂವಿಧಾನದ ಅಧಿಕಾರಕ್ಕೆ ಮೀರಿದವು; ಆದ್ದರಿಂದ ಅವು ಸಿಂಧುವಲ್ಲ ಎಂದು ಪಂಜಾಬ್ ಮತ್ತು ಹರಿಯಾನ ಹೈಕೋರ್ಟಿನ ವಿಶೇಷಪೀಠ ಇಂದು ಸರ್ವಾನುಮತದಿಂದ ತೀರ್ಪು ನೀಡಿತು.
ಯಾವುದು ಅಶ್ಲೀಲ!
ನವದೆಹಲಿ, ಮೇ 10– ಅಶ್ಲೀಲ ಜಾಹಿರಾತು ಎಂದರೆ ಯಾವುದು?
ಈ ಜಟಿಲ ಪ್ರಶ್ನೆ ಇಂದು ಲೋಕ ಸಭೆಯಲ್ಲಿ ಪ್ರಸ್ತಾಪಕ್ಕೆ ಬಂದಾಗ ಸ್ವಾರಸ್ಯಪೂರ್ಣ ನುಡಿಗಳು ಕೇಳಿಬಂದವು.
ಶ್ರೀ ಹೇಂಬರುವ ಅವರು ಕೆಲವು ಅಶ್ಲೀಲ ಜಾಹಿರಾತುಗಳ ಪಟ್ಟಿ ಕೊಡುತ್ತಾ ಈ ವಿಷಯವನ್ನು ಪ್ರಾರಂಭಿಸಿದರು. ಆ ಪಟ್ಟಿಗೆ ತಾವೊಂದಿಷ್ಟು ಸೇರಿಸುವುದಾಗಿ ಶ್ರೀ ಮನುಭಾಯ್ ಪಟೇಲ್ ತಿಳಿಸಿದಾಗ ‘ಅಶ್ಲೀಲವೆಂದು ಕೆಲವರು ಭಾವಿಸುವುದು ಮತ್ತೆ ಕೆಲವರಿಗೆ ಅಶ್ಲೀಲವೆನಿಸಲಾರದು’ ಎಂದು ಗೃಹಸಚಿವ ಶ್ರೀ ವೈ.ಬಿ. ಚವಾಣ್ ಹೇಳಿದರು.
‘... ಕೂಡ ಮುಚ್ಚದಷ್ಟು ಪಾರದರ್ಶಕ ಸೀರೆಯನ್ನುಟ್ಟ ಮಹಿಳೆಯೊಬ್ಬಳನ್ನು ತೋರಿಸುವ ಜಾಹಿರಾತೊಂದನ್ನು ಪತ್ರಿಕೆಯೊಂದು ಪ್ರಕಟಿಸಿದೆ ಎಂದು ಶ್ರೀ ಬರುವ ಹೇಳಿದರು.
‘ಸಾಕು ಸಾಕು ಇನ್ನು ಮುಂದೆ ಹೋಗಬೇಡಿ’ ಎಂದು ಸ್ಪೀಕರ್ ಹೇಳಿದಾಗ ಸದಸ್ಯರು ನಕ್ಕರು.
ಸಂಧಾನ ವಿಫಲವಾದರೆ ಸಮಸ್ಯೆ ಸುಪ್ರೀಂ ಕೋರ್ಟ್ ಪರಿಶೀಲನೆಗೆ
ಪಣಜಿ, ಮೇ 10– ಎಲ್ಲ ಅಂತರರಾಜ್ಯ ಜಲ ವಿವಾದಗಳನ್ನು ಪ್ರಥಮತಃ ಸಂಧಾನದ ಮೂಲಕ ಪರಿಹರಿಸಲು ಪ್ರಯತ್ನಿಸುವುದೇ ಕೆಂದ್ರ ಸರಕಾರದ ಕ್ರಮವಾಗಿದೆ ಎಂದು ನೀರಾವರಿ ಮತ್ತು ವಿದ್ಯುತ್ ಖಾತೆ ಸಚಿವ ಡಾ. ಕೆ.ಎಲ್. ರಾವ್ ಅವರು ನಿನ್ನೆ ಇಲ್ಲಿ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.
ದಕ್ಷಿಣದಲ್ಲಿ ಸಂಸತ್ ಅಧಿವೇಶನದ ಬಗ್ಗೆ ನಿರ್ಧರಿಸಲು ಸಮಿತಿ
ನವದೆಹಲಿ, ಮೇ 10– ದಕ್ಷಿಣ ಭಾರತದಲ್ಲಿ ಸಂಸತ್ ಅಧಿವೇಶನವನ್ನು ನಡೆಸುವ ಸಾಧ್ಯತೆಯ ಬಗ್ಗೆ ನಿರ್ಧರಿಸಲು ಹದಿನೆಂಟು ಮಂದಿ ಸದಸ್ಯರನ್ನೊಳಗೊಂಡ ಸಮಿತಿಯೊಂದನ್ನು ರಚಿಸುವುದಾಗಿ ಸಂಸದೀಯ ವ್ಯವಹಾರಗಳ ಸಚಿವ ಡಾ. ರಾಮ್ಸುಭಗ್ಸಿಂಗ್ ಅವರು ಇಂದು ರಾಜ್ಯಸಭೆಯಲ್ಲಿ ಪ್ರಕಟಿಸಿದರು.