ಬೇಲೂರು: ಅಡುಗೆ ಮನೆಗೆ ಬಂದು ಗಲಾಟೆ ಮಾಡಿತು ಎಂದು ಅಂಗನವಾಡಿ ಸಹಾಯಕಿಯೊಬ್ಬರು ಮೂರು ವರ್ಷದ ಬಾಲಕಿ ಮುಖಕ್ಕೆ ಗಂಜಿ ಅಂಟಿದ್ದ ಸೌಟಿನಿಂದ ತಿವಿದು ಗಾಯಗೊಳಿಸಿರುವ ಘಟನೆ ನಡೆದಿದೆ.
ನೆಹರು ನಗರದ ಜೈಭೀಮ್ ಬಡಾವಣೆಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಘಟನೆ ನಡೆದಿದ್ದು, ಬಾಲಕಿ ಶ್ರಾವಣಿ ಗಲ್ಲಕ್ಕೆ ಸುಟ್ಟಗಾಯವಾಗಿದೆ. ಕೃತ್ಯ ಎಸಗಿದ ಅಂಗನವಾಡಿ ಸಹಾಯಕಿ ಇಂದಿರಮ್ಮ ಅಮಾನತಿಗೆ ಆಗ್ರಹಪಡಿಸಿ ನಿವಾಸಿಗಳು ಪ್ರತಿಭಟಿಸಿದರು.
ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ ನಿವಾಸಿಗಳು, ಸಹಾಯಕಿಯನ್ನು ಹಿಡಿದು ಎಳೆದಾಡಿದ್ದು, ಅಂಗನವಾಡಿ ಕೇಂದ್ರದಿಂದ ಹೊರಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು.
ಬಾಲಕಿ ಗಲಾಟೆ ಮಾಡುತ್ತಾ ಸಹಾಯಕಿ ಇಂದಿರಮ್ಮ ಬಳಿಗೆ ಬಂದಿದೆ. ಗಲಾಟೆಯಿಂದ ಸಿಟ್ಟಾದ ಅವರು ಸೌಟಿನಿಂದ ಮಗುವಿನ ಕೆನ್ನೆ, ಕತ್ತಿನ ಭಾಗಕ್ಕೆ ತಿವಿದಿದ್ದಾರೆ. ಮಗುವಿನ ಚೀರಾಟ ಗಮನಿಸಿದ ಸ್ಥಳೀಯರು ಬಂದು ಆರೈಕೆ ಮಾಡಿದ್ದಾರೆ.
‘ನ್ಯಾಯ ಒದಗಿಸಬೇಕು, ಸಹಾಯಕಿ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಕೇಂದ್ರಕ್ಕೆ ಬೀಗ ಹಾಕುತ್ತೇನೆ’ ಎಂದು ಮಗುವಿನ ತಂದೆ ಶಿವಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಬಂದ ಪುರಸಭೆ ಸದಸ್ಯ ಮಂಜುನಾಥ್ ಅವರು, ‘ಸಹಾಯಕಿ ಇಂದಿರಮ್ಮ ಕೆಲಸಕ್ಕೆ ಸರಿಯಾಗಿ ಬರುವುದಿಲ್ಲ. ಮಕ್ಕಳಿಗೆ ಶುದ್ಧ ನೀರು, ಹಾಲು, ಮೊಟ್ಟೆ ನೀಡುವುದಿಲ್ಲ’ ಎಂದು ಆರೋಪಿಸಿದರು. ಸಹಾಯಕಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.