ಹುಬ್ಬಳ್ಳಿ: ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುವ ವೇಳೆ ಚಕ್ಕಡಿ ಮೇಲಿಂದ ಬಿದ್ದು ಸಾವಿಗೀಡಾದ ಕಾಂಗ್ರೆಸ್ನ ಗ್ರಾಮೀಣ ಘಟಕದ ಜಿಲ್ಲಾ ಅಧ್ಯಕ್ಷ ಎಚ್.ವಿ.ಮಾಡಳ್ಳಿ ಅವರ ಹಳ್ಳಿಕೇರಿಯಲ್ಲಿರುವ ಮನೆಗೆ ಗುರುವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಮಾಡಳ್ಳಿ ಪುತ್ರ ವೆಂಕಟೇಶ್ ಹಾಗೂ ಮೂವರು ಪುತ್ರಿಯರಿಗೆ ಧೈರ್ಯ ಹೇಳಿದರು. ಮಾಡಳ್ಳಿ ದೆಹಲಿಗೆ ಬಂದಾಗ ತಮ್ಮನ್ನು ಭೇಟಿ ಮಾಡಿದ್ದನ್ನು ಅವರು ನೆನಪಿಸಿಕೊಂಡರು.
‘ಅವರ ಅಗಲಿಕೆಯಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಕುಟುಂಬದ ಯಾರಾದರೂ ಬಯಸಿದರೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು. ಏನಾದರೂ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತರಬೇಕು’ ಎಂದು ರಾಹುಲ್ ಕುಟುಂಬ ಸದಸ್ಯರಿಗೆ ಹೇಳಿದರು ಎನ್ನಲಾಗಿದೆ.
ಕೆ.ಸಿ.ವೇಣುಗೋಪಾಲ್, ಸಚಿವ ಎಚ್.ಕೆ.ಪಾಟೀಲ, ನವಲಗುಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ, ಇದ್ದರು.