ಗುರುವಾರ ಬೈಂದೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕ್ಷೇತ್ರದಲ್ಲಿ ಮನೆ ಇಲ್ಲದ ಬಡಜನರು ಇದ್ದಾರೆ. ಅವರಿಗೆ 94ಸಿ ಮತ್ತು 94ಸಿಸಿ ನಿಯಮದ ಅಡಿ ಸೌಲಭ್ಯ ದೊರಕಿಲ್ಲ. ದೊರಕಿದವರಿಗೂ ಇನ್ನೂ ಆರ್ಟಿಸಿ ನೀಡಿಲ್ಲ. ನಿಯಮ 50, 52ರ ಅಧೀನದ ಅಕ್ರಮ ಸಕ್ರಮದ ಒಂದು ಲಕ್ಷ ಅರ್ಜಿ ವಿಲೇವಾರಿಯಾಗದೆ ಉಳಿದಿವೆ. ಇಲ್ಲಿ ಉದ್ಯೋಗ ಸೃಷ್ಟಿಗೆ ಪೂರಕವಾಗುವ ಬಾಕ್ಸೈಟ್ ಗಣಿಗಾರಿಕೆ, ರಬ್ಬರ್ ಬೆಳೆ, ಶಾಂತಿಯುತ ಬದುಕಿಗೆ ಅಗತ್ಯವಾಗಿರುವ ಕೋಮುಸಾಮರಸ್ಯದತ್ತ ಅವು ಗಮನ ಹರಿಸಿಲ್ಲ. ಎಡಪಕ್ಷಗಳ ಒತ್ತಾಯದ ಫಲವಾಗಿ ಯುಪಿಎ ಸರ್ಕಾರ ಜಾರಿಗೊಳಿಸಿದ್ದ ರಾಷ್ಟ್ರೀಯ ಉದ್ಯೋಗ ಭರವಸೆ ಯೋಜನೆಯ ದೋಷಪೂರಿತ ಅನುಷ್ಠಾನವನ್ನು ಸರಿದಾರಿಗೆ ತರುವ ಭರವಸೆ ಬಂದಿಲ್ಲ. ಸಿಪಿಐ (ಎಂ) ಇವುಗಳನ್ನು ಚುನಾವಣಾ ವಿಷಯವನ್ನಾಗಿ ಮಾಡಿದೆ. ನಮ್ಮ ಅಭ್ಯರ್ಥಿ ಗೆದ್ದರೆ ವಿಧಾನಸಭೆಯಲ್ಲಿ, ಇಲ್ಲವಾದರೆ ಹೊರಗೆ ಇವುಗಳ ಕುರಿತು ಹೋರಾಟ ನಡೆಸುವುದು’ ಎಂದು ಹೇಳಿದರು.