ಮಂಡ್ಯ: ರೈತರ ಹೆಸರಲ್ಲಿ ಕಳೆದ ಐದು ವರ್ಷಗಳ ಕಾಲ ಆಳ್ವಿಕೆ ನಡೆಸಿದ ಶಾಸಕರು (ಕೆ.ಎಸ್. ಪುಟ್ಟಣ್ಣಯ್ಯ) ಯಾವ ಕೆಲಸ ಮಾಡಿದ್ದಾರೆ, ಹೇಗೆ ದುಡ್ಡು ಮಾಡಿದ್ದಾರೆ ಎಂದು ನನಗೆ ಗೊತ್ತು ಎಂದು ಆರೋಪ ಮಾಡಿರುವ ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಪುಟ್ಟಣ್ಣಯ್ಯ ಅವರ ಮಗ ದರ್ಶನ್ ಪುಟ್ಟಣ್ಣಯ್ಯ ಸವಾಲೆಸೆದಿದ್ದಾರೆ.
ಮೇಲುಕೋಟೆ ಕ್ಷೇತ್ರದ ದುದ್ದ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಕುಮಾರಸ್ವಾಮಿ ಪುಟ್ಟಣ್ಣಯ್ಯ ಅವರ ಬಗ್ಗೆ ಈ ರೀತಿ ಆರೋಪ ಮಾಡಿದ್ದರು. ಈ ಬಗ್ಗೆ ದರ್ಶನ್ ಪುಟ್ಟಣ್ಣಯ್ಯ ಫೇಸ್ಬುಕ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
</p><p><strong>ಫೇಸ್ಬುಕ್ ಪೋಸ್ಟ್ ನಲ್ಲಿ ಏನಿದೆ?</strong><br/> ಚುನಾವಣೆ ಸಂದರ್ಭದಲ್ಲಿ ಆರೋಪ, ಪ್ರತಿ ಆರೋಪ ಇದ್ದೇ ಇರುತ್ತದೆ. ನಾನಂತೂ ಯಾರ ಮೇಲೂ ಸುಳ್ಳು ಆರೋಪ ಮಾಡುವುದಿಲ್ಲ. ಹಿರಿಯರಾದ ಶ್ರೀ ಕುಮಾರಣ್ಣನವರಿಗೆ ಸುಳ್ಳು ಆರೋಪ ಮಾಡಬೇಡಿ ಎಂದು ವಿನಂತಿಸುವುದು ತಪ್ಪಲ್ಲ ಎಂದುಕೊಂಡಿದ್ದೇನೆ. ಇಡೀ ರಾಜ್ಯಕ್ಕೆ ಗೊತ್ತು, ನನ್ನ ಅಪ್ಪ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿಲ್ಲ ಹಾಗೂ ನಾಟಕ ಆಡಿಲ್ಲ. ಈ ರೀತಿಯಿರುವಾಗ ಕುಮಾರಣ್ಣನವರು ನನ್ನ ತಂದೆಯ ಬಗ್ಗೆ ಸುಳ್ಳು ಆರೋಪ ಮಾಡಬಾರದಿತ್ತು.</p><p>ಶ್ರೀ ಕುಮಾರಣ್ಣನವರ ಹತಾಶೆಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ, ನಾನು ಭೇಟಿ ಮಾಡಿದ ಅನೇಕ ಅನೇಕ ಜೆಡಿಎಸ್ ಮುಖಂಡರು ನಮ್ಮ ಹುಡುಗರು ಈಗ ನಿನ್ನ ಪರ ಆಗಿಬಿಟ್ಟಿದ್ದಾರಪ್ಪ. ನಮ್ಮ ಮನೆಯ ಹೆಣ್ಣು ಮಕ್ಕಳು ನಿನಗೇ ಓಟು ಹಾಕೋದು ಗ್ಯಾರಂಟಿ ಅನಿಸ್ತಾ ಇದೆ. ಈಗ ಅವ್ರು ನಮ್ಮ ಮಾತು ಕೇಳುತ್ತಿಲ್ಲ, ನಿಮ್ಮಪ್ಪನ ಕಾಲದಲ್ಲಿ ಈ ರೀತಿ ಆಗಿರಲಿಲ್ಲ. ನಮಗೆ ನುಂಗಲಾರದ ತುತ್ತಾಗಿದೆ ಎಂದು ಹೇಳುತ್ತಿದ್ದಾರೆ.ಹೀಗಿರುವಾಗ ಹತಾಶೆ ಸಹಜವೇ. ಆದರೂ ನಮ್ಮ ಅಪ್ಪನ ಬಗ್ಗೆ ಇಂಥ ಅನ್ಯಾಯದ ಮಾತು ಆಡಬೇಡಿ ಎಂದು ವಿನಂತಿಸುವೆ.<br/> ಅಥವಾ ನನ್ನ ಅಪ್ಪನ ಆಸ್ತಿ ಹಾಗೂ ಶ್ರೀ ಪುಟ್ಟರಾಜಣ್ಣನವರ ಆಸ್ತಿಯನ್ನು ಅದಲು ಬದಲು ಮಾಡಿಸಿಕೊಡಿ. ತಾವು ಕೃಪೆ ತೋರಿ ಹಾಗೆ ಮಾಡಿಕೊಡಿಸುವುದಾದರೆ ನನಗೆ ಬರುವ ನೂರಾರು ಕೋಟಿ ರೂಪಾಯಿಗಳನ್ನು ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸುತ್ತೇನೆ ಎಂದು ನಾನು ತಮಗೆ ವಚನ ಕೊಡುತ್ತೇನೆ. ನಾನು ವಚನ ಭ್ರಷ್ಟ ಆಗುವುದಿಲ್ಲ. ಇದು ನನ್ನ ವಿನಮ್ರ ಸವಾಲು.</p></p>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.