ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ನಿಧನ

Last Updated 11 ಮೇ 2018, 20:30 IST
ಅಕ್ಷರ ಗಾತ್ರ

ಧಾರವಾಡ: ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ (79) ಶುಕ್ರವಾರ ಸಂಜೆ ನಿಧನರಾದರು.

ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ ಅಧ್ಯಕ್ಷರಾಗಿದ್ದ ಅವರು ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಹಲವಾರು ಕತೆ, ಕವಿತೆ ಹಾಗೂ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಬಳಿ ಇರುವ ತಮ್ಮ ಮನೆಯಲ್ಲಿ ತೀವ್ರ ಹೃದಯಾಘಾತದಿಂದ ಅವರು ನಿಧನರಾದರು.

ಕನ್ನಡದ ಶ್ರೇಷ್ಠ ವಿಮರ್ಶಕ ಗಿರಡ್ಡಿ

ಗಿರಡ್ಡಿ ಗೋವಿಂದರಾಜ ಅವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೇರಿಯಲ್ಲಿ. ತಂದೆ ಅಂದಾನಪ್ಪ, ತಾಯಿ ಸಂಗಮ್ಮ. ಅಬ್ಬಿಗೇರಿ, ನರೇಗಲ್ಲ, ರೋಣಗಳಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಇವರು ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ., ಕರ್ನಾಟಕ ವಿಶ್ವವಿದ್ಯಾಲಯದಿಂದ 1963ರಲ್ಲಿ ಎಂ.ಎ. (ಇಂಗ್ಲಿಷ್) ಮತ್ತು ಎಂ.ಎ. (ಕನ್ನಡ) ಪದವಿ ಪಡೆದರು. ನಂತರ ಇಂಗ್ಲೆಂಡ್‌ನಲ್ಲಿ ಭಾಷಾಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದರು. ಹೈದರಾಬಾದ್ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್‌ನಲ್ಲಿ ‘ಡಿಪ್ಲೊಮ ಇನ್ ಇಂಗ್ಲಿಷ್ ಸ್ಟಡೀಸ್’ನಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದರು. ‘FREE INDIRECT SPEECH IN ENGLISH FICTIONS’ (ಶೈಲಿ ಶಾಸ್ತ್ರಕ್ಕೆ ಸಂಬಂಧಿಸಿದ್ದು) ಮಹಾಪ್ರಬಂಧ ಮಂಡಿಸಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪಡೆದಿದ್ದರು.

ಹನುಮನ ಹಟ್ಟಿಯ ಮಹಾವಿದ್ಯಾಲಯದಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಗಿರಡ್ಡಿಯವರು, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ 1996ರಲ್ಲಿ ನಿವೃತ್ತಿ ಹೊಂದಿದ್ದರು. ಪ್ರೌಢಶಾಲೆಯಲ್ಲಿದ್ದಾಗಲೇ ಸಾಹಿತ್ಯದತ್ತ ಒಲವು ಹೊಂದಿದ್ದರು. ಇವರ ‘ಶಾರದಾ ಲಹರಿ’ ನೀಳ್ಗವಿತೆ 1956ರಲ್ಲಿ ಪ್ರಕಟವಾಗಿತ್ತು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ‘ರಸವಂತಿ’ ಕವನ ಸಂಕಲನ ಪ್ರಕಟಿಸಿದ್ದರು.

ಗೆಳೆಯರಾದ ಚಂಪಾ, ಸಿದ್ಧಲಿಂಗ ಪಟ್ಟಣಶೆಟ್ಟಿ  ಜೊತೆಗೂಡಿ ‘ಸಂಕ್ರಮಣ’ ದ್ವೈಮಾಸಿಕ ಪತ್ರಿಕೆ ಹೊರತಂದಾಗ ವಿಮರ್ಶೆ ಬರೆಯಬೇಕಾದ ಪರಿಸ್ಥಿತಿ ಅವರಿಗೆ ಎದುರಾಗಿತ್ತು. ಮುಂದೆ ವಿಮರ್ಶಾ ಕ್ಷೇತ್ರದಲ್ಲಿ ಸ್ಥಾನ ಪಡೆದರು. ‘ರಂಗ ಮಾಧ್ಯಮ’ ನಾಟಕ ಸಂಸ್ಥೆಯ ಸ್ಥಾಪಿಸಿ ಅಭಿನಯ, ನಟನೆ, ನಿರ್ದೇಶನದಲ್ಲಿ ಖ್ಯಾತಿ ಪಡೆದರು.

ಹತ್ತಾರು ಪ್ರಶಸ್ತಿಗಳು...

ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಅಂಬಿಕಾತನಯದತ್ತ ಪ್ರಶಸ್ತಿ, ಡಾ. ಜಿಎಸ್ಸೆಸ್ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಬಹುಮಾನ, ಆರ್.ಎಸ್.ನಾಯಡು ಬಹುಮಾನ, ವಿ.ಎಂ.ಇನಾಮದಾರ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳಿಗೆ ಗಿರಡ್ಡಿ ಅವರು ಭಾಜನರಾಗಿದ್ದಾರೆ.

ಪ್ರಕಟಿತ ಪ್ರಮುಖ ಕೃತಿಗಳು

* ಶಾರದಾ ಲಹರಿ (ಕಾವ್ಯ)
* ರಸವಂತಿ (ಕವನ ಸಂಕಲನ)
* ಮರ್ಲಿನ್ ಮನ್ರೋ
* ಆ ಮುಖ ಈ ಮುಖ, ಹಂಗು ಮತ್ತು ಇತರ ಕಥೆಗಳು(ಕಥಾಸಂಕಲನ) (ಹಂಗು ಕಥೆ ಪುಟ್ಟಣ್ಣ ಕಣಗಾಲರ ನಿರ್ದೇಶನದ ಕಥಾಸಂಗಮದ ಚಲನಚಿತ್ರದಲ್ಲಿ ಚಿತ್ರಿತವಾದ ಕಥೆ)
* ಒಂದು ಬೇವಿನ ಮರದ ಕಥೆ
* ಸಣ್ಣ ಕಥೆಯ ಹೊಸ ಒಲವುಗಳು (ವಿಮರ್ಶೆ)
* ಜನಪದ ಕಾವ್ಯ
* ನವ್ಯ ವಿಮರ್ಶೆ
* ಕಾದಂಬರಿ-ವಸ್ತು ಮತ್ತು ತಂತ್ರ
* ಸಾಹಿತ್ಯ ಮತ್ತು ಪರಂಪರೆ ಇಂಗ್ಲೆಂಡಿನ ರಂಗಭೂಮಿ
* ನಾಟಕ ಸಾಹಿತ್ಯ ಮತ್ತು ರಂಗಭೂಮಿ
* ಸಾತತ್ಯ, AN INTRODUCTION TO GENERAL LINGUISTICS
* ಸಾಮಾಜಿಕ ಭಾಷಾಶಾಸ್ತ್ರ-ಕನ್ನಡ ಡೈಗ್ಲಾಸಿಯಾ
* ವಚನಗಳ ರಾಚನಿಕ ವಿನ್ಯಾಸ ಮುಂತಾದ ಕೃತಿಗಳು

**
‘ನಾನು, ಚಂಪಾ ಹಾಗೂ ಗಿರಡ್ಡಿ ಕೂಡಿ ಕಲಿತು ಸಾಂಸ್ಕೃತಿಕ ಜಗತ್ತು, ನವ್ಯ ಸಾಹಿತ್ಯ, ರಂಗಭೂಮಿಗೆ ಹೊಸ ಆಯಾಮ ಕೊಟ್ಟಿದ್ದೆವು. ಈಗಲೂ ಅದು ಹಾಗೆಯೇ ಇದೆ. ಅವರನ್ನು ಕಳೆದುಕೊಂಡಿದ್ದನ್ನು ನಂಬಲು ಸಾಧ್ಯವಿಲ್ಲ. ಅವರ ಅಗಲಿಕೆ ತೀವ್ರ ಆಘಾತ ತಂದಿದೆ. ಕಲಬುರ್ಗಿ ಇಲ್ಲವಾದರು, ಈಗ ಗಿರಡ್ಡಿಯೂ ಅಗಲಿದರು. ಅವರ ನಿಧನ ಭರಿಸಲಾಗದ ನೋವು ತಂದಿದೆ.

– ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT