ಮಹಾರಾಷ್ಟ್ರ–ಮೈಸೂರು ಗಡಿ ವಿವಾದ: ಜನಮತ ಸಂಗ್ರಹ ಸಲಹೆಗೆ ಹೆಗಡೆ ವಿರೋಧ
ಶಿರಸಿ, ಮೇ 11– ‘ಮಹಾರಾಷ್ಟ್ರ– ಮೈಸೂರು ಗಡಿ ವಿವಾದ ಇತ್ಯರ್ಥಕ್ಕೆ ಕೇಂದ್ರ ಗೃಹ ಸಚಿವ ಶಾಖೆ ರೂಪಿಸುತ್ತಿದೆಯೆಂದು ಹೇಳಲಾಗಿರುವ ಜನಾಭಿಪ್ರಾಯ ಸಂಗ್ರಹಣೆ ವಿಧಾನವು ಅಸಂಬದ್ಧವಾದುದು ಮತ್ತು ರಾಷ್ಟ್ರಹಿತಕ್ಕೆ ಅಪಾಯಕಾರಿ’ ಎಂದು ರಾಜ್ಯ ಅರ್ಥಮಂತ್ರಿ ಶ್ರೀ ರಾಮಕೃಷ್ಣ ಹೆಗಡೆಯವರು ತಿಳಿಸಿದರು.
ಇಲ್ಲಿಗೆ 20 ಮೈಲಿ ದೂರದಲ್ಲಿರುವ ತಮ್ಮ ಗ್ರಾಮವಾದ ಸಿದ್ದಾಪುರದಲ್ಲಿ ಪತ್ರಕರ್ತರೊಡನೆ ಮಾತನಾಡುತ್ತಾ ಶ್ರೀ ಹೆಗಡೆ ಅವರು ಇಂತಹ ವಿಧಾನವು ದೇಶದ ಇತರೆಡೆಗಳಲ್ಲೂ ಇದೇ ವಿಧವಾದ ಬೇಡಿಕೆಗಳು ತಲೆ ಎತ್ತಲು ಪ್ರಚೋದಿಸುವುದೆಂದೂ ಹೇಳಿದರು.
ಲಂಡನ್ ಚೌಕದಲ್ಲಿ 17ರಂದು ಗಾಂಧಿ ಪ್ರತಿಮೆ ಅನಾವರಣ
ನವದೆಹಲಿ, ಮೇ 10– ಇಲ್ಲಿನ ಬ್ಲೂಮ್ಸ್ಬರಿ ಕೇಂದ್ರ ಪ್ರದೇಶ ಟಾನಿಸ್ಟಾಕ್ ಚೌಕದಲ್ಲಿ ಮೇ 17ರಂದು ಪ್ರಧಾನಮಂತ್ರಿ ಹೆರಾಲ್ಡ್ ವಿಲ್ಸನ್ ಅವರು ಮಹಾತ್ಮಾ ಗಾಂಧಿ ಸ್ಮಾರಕ ಪ್ರತಿಮೆಯನ್ನು ಅನಾವರಣ ಮಾಡುವರು.
ಪಿತ್ತಜನಕಾಂಗ ಅಳವಡಿಸುವ ಪ್ರಯೋಗಕ್ಕೆ ಸಿದ್ಧತೆ
ನವದೆಹಲಿ, ಮೇ 10– ಪಿತ್ತಜನಕಾಂಗವನ್ನೂ ಇನ್ನೊಂದು ದೇಹಕ್ಕೆ ಶೀಘ್ರದಲ್ಲೇ ಅಳವಡಿಸಬಹುದಾದ ಪ್ರಯೋಗಕ್ಕೆ ಬ್ರಿಸ್ಟಲ್ ಆಸ್ಪತ್ರೆಯಲ್ಲಿ ವೈದ್ಯರು ಸಿದ್ಧರಾಗುತ್ತಿದ್ದಾರೆಂದು ಲಂಡನ್ನಿನ ‘ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.
ಕೋಮುಶಕ್ತಿಗಳ ವಿರುದ್ಧ ಹೋರಾಟ: ಕಾಂಗ್ರೆಸ್ಸಿಗರಿಗೆ ಇಂದಿರಾ, ಎಸ್ಸೆನ್ ಕರೆ
ನವದೆಹಲಿ, ಮೇ 10– ದೇಶದಲ್ಲಿ ತಲೆ ಎತ್ತಿರುವ ಜಾತೀಯ ಮತ್ತಿತರ ವಿಚ್ಛಿದ್ರಕಾರಕ ಶಕ್ತಿಗಳ ವಿರುದ್ಧ ಕಾಂಗ್ರೆಸ್ಸಿಗರು ಉಗ್ರ ಹೋರಾಟ ನಡೆಸಿ ಹರಿಜನರು ಮತ್ತಿತರ ಅಲ್ಪ ಸಂಖ್ಯಾತ ಕೋಮಿನವರಿಗೆ ರಕ್ಷಣೆಯ ಭರವಸೆ ನೀಡಬೇಕೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪ ಮತ್ತು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಲ್ಲಿ ಮನವಿ ಮಾಡಿಕೊಂಡರು.
ದೇಶದ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ನಡೆದ ಕೋಮುವಾರು ಗಲಭೆಗಳ ಬಗ್ಗೆ ಅವರಿಬ್ಬರೂ ತಮ್ಮ ತೀವ್ರ ಆತಂಕವನ್ನು ವ್ಯಕ್ತಪಡಿಸಿದರು. ಸಂಸತ್ ಕಾಂಗ್ರೆಸ್ ಪಕ್ಷದ ಸರ್ವಪಕ್ಷದ ಸಭೆಯನ್ನು ಉದ್ದೇಶಿಸಿ ಅವರಿಬ್ಬರೂ ಭಾಷಣ ಮಾಡಿದರು.
ಮದುವೆ ಚಪ್ಪರ ಅಗ್ನಿಗೆ ಆಹುತಿ: 63 ಮಂದಿ ಸಜೀವದಹನ
ವಿಜಯವಾಡ, ಮೇ 11– ಸಡಗರ, ಸಂಭ್ರಮದಿಂದ ತುಂಬಿದ್ದ ಮದುವೆಯ ಚಪ್ಪರಕ್ಕೆ ಪೆಟ್ರೋಮ್ಯಾಕ್ಸ್ ದೀಪದ ಉರಿ ತಗುಲಿ 63 ಜನ ಸಾವನ್ನಪ್ಪಿದ ದುರ್ಘಟನೆ ಗೋಪಿವಾರಿಗುಡಂ ಎಂಬ ಹಳ್ಳಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿತು.
ಸತ್ತವರಲ್ಲಿ ಹೆಚ್ಚು ಜನ ಮಹಿಳೆಯರು ಮತ್ತು ಮಕ್ಕಳು. ಅಪಘಾತ ಸ್ಥಳದಲ್ಲಿ 49 ಮಂದಿ ಸತ್ತರು. ಉಳಿದವರು ಇಲ್ಲಿಯ ಆಸ್ಪತ್ರೆಯಲ್ಲಿ ಸತ್ತರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.