ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಹಿನ್ನೀ­ರಿನ ಕೌತುಕ ಕ್ಷಣ­ಗಳು...

Last Updated 12 ಮೇ 2018, 19:30 IST
ಅಕ್ಷರ ಗಾತ್ರ

ಭದ್ರಾ ನದಿಗೆ ಅಡ್ಡ­ಲಾಗಿ ಚಿಕ್ಕ­ಮ­ಗ­ಳೂರು - ಶಿವ­ಮೊಗ್ಗ ಜಿಲ್ಲೆಯ ಗಡಿ ಪ್ರದೇಶ ಲಕ್ಕ­ವ­ಳ್ಳಿ­ಯಲ್ಲಿ 1965ರಲ್ಲಿ ನೀರಾ­ವರಿ ಉದ್ದೇ­ಶ­ದಿಂದ 1,708 ಮೀಟರ್ ಉದ್ದ, 59.13 ಮೀಟರ್ ಎತ್ತ­ರದ ಅಣೆ­ಕಟ್ಟು ನಿರ್ಮಾಣ­ವಾ­ಗಿದೆ. ಭದ್ರಾ ಜಲಾ­ಶ­ಯದ ಚೆಲುವು ಅನನ್ಯ. ನೀರು ಪೂರ್ತಿಯಾಗಿ ತುಂಬಿ ನಿಂತಾಗ ಅಲ್ಲಿನ ಚೆಲು­ವನ್ನು ಕಣ್ತುಂ­ಬಿ­ಕೊ­ಳ್ಳಲು ಎರಡು ಕಣ್ಣು­ಗ­ಳು ಸಾಲವು.

ಎಡ ಮತ್ತು ಬಲ­ದಂಡೆ ನಾಲೆ­ಗ­ಳನ್ನು ಹೊಂದಿ­ರುವ ಅಣೆ­ಕ­ಟ್ಟಿನ ಪರಿ­ಸ­ರ­ದಲ್ಲಿ ನೀರವ ಮೌನ ಭೇದಿಸುವ ಸಾವಿ­ರಾರು ಅಲೆ­ಗಳ ಸಪ್ಪಳ, ಬೀಸುವ ತಂಗಾಳಿ, ನಾಲ್ಕೂ ಗೇಟುಗ­ಳಿಂದ ನೀರನ್ನು ಹೊರ ಬಿಟ್ಟಾಗ ಹಾಲ್ನೊ­ರೆ­ಗ­ಳಂತೆ ಧುಮ್ಮಿಕ್ಕಿ ಹರಿ­ಯುವ ದೃಶ್ಯ ಮನ­ಮೋ­ಹಕ.

ವಾರದ ರಜಾ ದಿನ­ಗ­ಳಲ್ಲಿ ನೂರಾರು ಪ್ರವಾ­ಸಿ­ಗರು ಇಲ್ಲಿಗೆ ಭೇಟಿ ನೀಡು­ತ್ತಾರೆ. ಹಸಿರ ಬೆಟ್ಟ­ಗಳ ಮಧ್ಯ­ದಲ್ಲಿ ನಡು­ಗ­ಡ್ಡೆ­ಗಳ ಸುತ್ತ ನಿಂತ ನೀರನ್ನು ನೋಡಿ ಸಂತಸ ಪಡು­ತ್ತಾರೆ. ದಿನವಿಡೀ ಕಾಲ ಕಳೆ­ಯು­ತ್ತಾರೆ. ಸಂಭ್ರ­ಮಿ­ಸು­ತ್ತಾರೆ.

ಭದ್ರಾ ಹಿನ್ನೀ­ರಿ­ನಲ್ಲಿ ದೋಣಿ ವಿಹಾರ ಸೌಲ­ಭ್ಯವೂ ಇದೆ. ಅರಣ್ಯ ಮತ್ತು ವಸ­ತಿ­ಧಾಮ ನಿಗ­ಮದ ಸಹ­ಭಾ­ಗಿ­ತ್ವ­ದಲ್ಲಿ ನಿರ್ಮಿತ ಜಂಗಲ್ ರೆಸಾರ್ಟ್ ಉಸ್ತು­ವಾ­ರಿ­ಯಲ್ಲಿ ಇದು ನಡೆಯುತ್ತದೆ. ರೆಸಾ­ರ್ಟ್‌ನಲ್ಲಿ ವಾಸ್ತವ್ಯ ಹೂಡಿದ­ವರು ಮಾತ್ರ­ವ­ಲ್ಲದೆ ಇತರ ಪ್ರವಾ­ಸಿ­ಗರೂ ಇಲ್ಲಿಗೆ ಭೇಟಿ ನೀಡಿ ದೋಣಿ ವಿಹಾರ ಕೈಗೊ­ಳ್ಳಲು ಅನು­ಕೂಲ ಮಾಡಿ­ಕೊ­ಡ­ಲಾ­ಗಿದೆ. ಪ್ರತಿ­ ವ್ಯಕ್ತಿಗೆ ₹ 350 ಶುಲ್ಕ ವಿಧಿಸು­ತ್ತಾರೆ.

ಸರಿ­ಸು­ಮಾರು ಒಂದು ಗಂಟೆಯ ನೀರ ಪಯಣ. ಬೆಳಿಗ್ಗೆ ಹಾಗೂ ಸಂಜೆ ರೆಸಾರ್ಟ್‌ನವರ ಕಡೆಯಿಂದ ಪ್ರಯಾಣ ವ್ಯವಸ್ಥೆ ಇದ್ದು, ಉಳಿದ ಅವ­ಧಿಗ­ಳಲ್ಲಿ ಕನಿಷ್ಠ 15 ಪ್ರವಾ­ಸಿ­ಗರು ಇದ್ದರೆ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ವಿಶಾ­ಲ­ವಾದ ಹಿನ್ನೀ­ರಿ­ನಲ್ಲಿ ದೋಣಿ­ಯಲ್ಲಿ ಹೋಗು­ವಾಗ ಸಿಗುವ ಅನು­ಭವ ಅನನ್ಯ. ಒಂದೆಡೆ ಬಾನಂ­ಗ­ಳ­ದಲ್ಲಿ ಮೋಡದ ಚಿತ್ತಾ­ರ­ಗಳು. ಕಣ್ಣು­ಹಾ­ಯಿ­ಸಿ­ದಷ್ಟೂ ದೂರ ಕಾಣುವ ನೀರು. ಇನ್ನೊಂ­ದೆಡೆ ಹಸಿರು ಹೊದ್ದು ನಿಂತ ಗುಡ್ಡ­ಗಳು. ಮಗ­ದೊಂ­ದೆಡೆ ನಡು­ಗಡ್ಡೆ ಭೇದಿ­ಸುತ್ತಾ ಸಾಗುವ ಪರಿ ವರ್ಣ­ನೆಗೆ ಸಿಲು­ಕದು.


ಭದ್ರಾ ಹಿನ್ನೀರು ಪ್ರದೇಶದಲ್ಲಿ ಕಾಣುವ ಕಾಡು, ಸೂರ್ಯಾಸ್ತದ ದೃಶ್ಯ ಹಾಗೂ ನಡುಗಡ್ಡೆ.

ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯ ಇಲ್ಲಿ ಚೆಂದಕ್ಕಿಂತ ಚೆಂದ. ಹೊಸ ಲೋಕ ಸೃಷ್ಟಿ ಆ ಹೊತ್ತಿನಲ್ಲಿ ಆಗುತ್ತದೆ. ಸೂರ್ಯ ಕೆಂಪನೆ ರಶ್ಮಿ­ಗ­ಳನ್ನು ಸೂಸುತ್ತಾ ಮುಳು­ಗುವ ಕ್ಷಣದ ದೃಶ್ಯ ಸೋಜಿಗ. ಕೆಂದೂ­ಳಿಯ ಓಕುಳಿ, ಹಿನ್ನೀ­ರಿನ ಮಧ್ಯೆ ಇರುವ ಒಣ ಮರ­ಗ­ಳಲ್ಲಿ ಕುಳಿತ ಹಕ್ಕಿ­ಗಳ ಬೆನ್ನು­ಡಿ­ಯಲ್ಲಿ ಕಾಣ ಸಿಗುವ ಈ ನೋಟ ಅದ್ಭುತ ಕಾವ್ಯ.

ರಾಶಿ, ರಾಶಿ ಅಲೆ­ಗಳ ನಡುವೆ ದೋಣಿಯ ಪಯಣ ಇನ್ನೊಮ್ಮೆ ಇಲ್ಲಿಗೆ ಬರು­ವಂತೆ ಮಾಡು­ತ್ತದೆ. ಬಿದಿರು, ತೇಗ ಇನ್ನಿ­ತರೆ ಹಸಿರು ಹಾಸಿನ ಗುಡ್ಡ­ಗಳ ಮಧ್ಯೆ ಅಲ್ಲಲ್ಲಿ ನಿರ್ಮಿ­ಸಿ­ರುವ ವಸ­ತಿ­ತಾಣ, ನೀರನ್ನು ಅರಸಿ ಬರುವ ಜಿಂಕೆ ಮತ್ತಿ­ತರೆ ಪ್ರಾಣಿ -ಪಕ್ಷಿ­ಗಳು, ನೂರಾರು ಹಕ್ಕಿ­ಗಳ ಕಲ­ರವ ಮನ­ಸ್ಸನ್ನು ಹಗು­ರ­ಗೊ­ಳಿ­ಸುವ ಟಾನಿಕ್ ಇದ್ದಂತೆ.

ವಾಸ್ತವ್ಯ ಹೂಡಿದ­ವ­ರಿಗೆ ಬೆಳಗ್ಗೆ ಮತ್ತು ಸಂಜೆ ಸಫಾರಿ ವ್ಯವ­ಸ್ಥೆಯೂ ಇದೆ. ಭದ್ರಾ ಅಭ­ಯಾರಣ್ಯ ವ್ಯಾಪ್ತಿಯ ಲಕ್ಕ­ವಳ್ಳಿ ಅಭ­ಯಾರ­ಣ್ಯ­ದಲ್ಲಿ ಎರಡು ಗಂಟೆ­ಗಳ ಪಯಣ. ಮಾರ್ಚ್‌ನಿಂದ ಜೂನ್ ಆರಂ­ಭ­ದ­ವ­ರೆಗೆ ಬಿಸಿ­ಗಾಳಿ ಇದ್ದರೆ, ಉಳಿದ ದಿನ­ಗ­ಳಲ್ಲಿ ತಣ್ಣನೆ ಹವೆ ಇಲ್ಲಿ­ಯದು.

ಹಚ್ಚ­ಹ­ಸಿರ ದಟ್ಟ ಕಾನ­ನದ ಮಧ್ಯೆ ಸಾಗು­ತ್ತಿ­ದ್ದಂತೆ ಜಿಂಕೆ, ಕಡ, ಕಾಡು ಹಂದಿ, ನವಿಲು ಕಾಣ­ಸಿ­ಕ್ಕರೆ ಅಪ­ರೂ­ಪಕ್ಕೆ ಕಾಡೆಮ್ಮೆ, ಆನೆ­ಗಳೂ ಸಿಗು­ತ್ತವೆ. ಕೆಲ­ವೊಮ್ಮೆ ಪ್ರಾಣಿ­ಗಳು ಸಿಗದೆ ನಿರಾ­ಶೆಯೂ ಆಗುವುದುಂಟು. ದಟ್ಟ ಕಾಡನ್ನು ಸೀಳಿ ನೆಲ ಸ್ಪರ್ಶಿ­ಸುವ ಸೂರ್ಯ ರಶ್ಮಿಯ ಸೊಬಗು, ಆಳೆ­ತ್ತರ ಬೆಳೆದ ಮರ­ಗಳು, ಗಿಡ­ಗಂಟಿ, ಹಕ್ಕಿ­ಗಳ ಕಲ­ರವ ಮನ­ಸ್ಸಿಗೆ ಉಲ್ಲಾಸ ನೀಡು­ತ್ತವೆ.

ಜಂಗಲ್ ರೆಸಾ­ರ್ಟ್‌ನಲ್ಲಿ ವಾಸ್ತವ್ಯ ಹೂಡಲು ತಗ­ಲುವ ವೆಚ್ಚ ಪ್ರತಿ­ ವ್ಯಕ್ತಿಗೆ ₹ 4600. ಇದ­ರಲ್ಲಿ ದೋಣಿ ವಿಹಾರ, ಅರಣ್ಯ ಸಫಾರಿ, ಊಟ ತಿಂಡಿಯೂ ಸೇರಿ­ರು­ತ್ತದೆ. ಅಣೆ­ಕಟ್ಟೆ ಹಾಗೂ ಹಿನ್ನೀ­ರಿನ ರಮಣೀಯ ದೃಶ್ಯ ನೋಡಿ ಹೋಗು­ವ­ವರು ಇಲ್ಲಿಗೆ ಬರ­ಬೇ­ಕಾ­ಗಿಲ್ಲ. ನೇರ­ವಾಗಿ ಅಣೆ­ಕಟ್ಟೆ ಪ್ರದೇ­ಶಕ್ಕೆ ಹೋಗಿ ವೀಕ್ಷಿ­ಸ­ಬ­ಹುದು. ಮುಕ್ತ ಪ್ರವೇಶ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT