ಹೊಸಪೇಟೆ/ ಬೆಳಗಾವಿ: ಮೂಲಸೌಕರ್ಯಕ್ಕೆ ಆಗ್ರಹಿಸಿ ಹಾಗೂ ಗರ್ಭಿಣಿಯ ಕೊಲೆ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಕ್ರಮವಾಗಿ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಕಮಲಾಪುರ ಕೆರೆ ತಾಂಡಾ ಹಾಗೂ ಬೆಳಗಾವಿ ಜಿಲ್ಲೆಯ ಹೊಗರ್ತಿಯಲ್ಲಿ ಗ್ರಾಮಸ್ಥರು ಶನಿವಾರ ಕೆಲ ತಾಸು ಮತದಾನ ಬಹಿಷ್ಕರಿಸಿದ್ದರು.
ಚುನಾವಣಾಧಿಕಾರಿಗಳು ಮನವೊಲಿಸಿದ ನಂತರ, ಮಧ್ಯಾಹ್ನ 2 ಗಂಟೆ ನಂತರ ತಾಂಡಾದಲ್ಲಿ ಮತದಾನ ಆರಂಭವಾಯಿತು. ಇಲ್ಲಿ 787 ಮತದಾರರಿದ್ದಾರೆ. ನಂತರ ಹೊಗರ್ತಿಯಲ್ಲಿಯೂ ಮತದಾನ ಮಾಡಿದರು.
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಹಾವೇರಿ: ಬ್ಯಾಡಗಿ ವಿಧಾನಸಭಾ ಕ್ಷೇತ್ರದ ದೇವಗಿರಿ ಮತಗಟ್ಟೆಯಲ್ಲಿ ಸರದಿಯಲ್ಲಿ ನಿಂತಿದ್ದ ಪಾರವ್ವ ಅರ್ಕಸಾಲಿ ಎಂಬ ಮಹಿಳೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಭದ್ರತಾ ಸಿಬ್ಬಂದಿ ತಕ್ಷಣವೇ ಧಾವಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಆ ಬಳಿಕ, ಚುನಾವಣಾಧಿಕಾರಿಗಳು ಮನವೊಲಿಸಿದ್ದರಿಂದ ಆ ಮಹಿಳೆ ಮತ ಚಲಾಯಿಸಿ ಮನೆಗೆ ಮರಳಿದರು.
ಕೌಟುಂಬಿಕ ಗೊಂದಲದಿಂದಾಗಿ ಹಾಗೂ ತಮಗೆ ಕೆಲವು ಸರ್ಕಾರಿ ಸೌಲಭ್ಯಗಳು ಸಿಕ್ಕಿಲ್ಲವೆಂದು ನೊಂದು ಆತ್ಮಹತ್ಯೆಗೆ ಮುಂದಾಗಿದ್ದಾಗಿ ಅವರು ಹೇಳಿದರು.