ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಡೆ ಶಾಂತಿಯುತ ಮತದಾನ

ಹಿತ ತಂದ ಮೋಡ ಕವಿದ ವಾತಾವರಣ; ಮಳೆಯಲ್ಲೂ ಕುಗ್ಗದ ಉತ್ಸಾಹ
Last Updated 13 ಮೇ 2018, 10:27 IST
ಅಕ್ಷರ ಗಾತ್ರ

ಶಿಗ್ಗಾವಿ: ತಾಲ್ಲೂಕಿನಾದ್ಯಂತ ಶಾಂತಿಯುತವಾಗಿ ಮತದಾನ ನಡೆಯಿತು. ಸಾರ್ವಜನಿಕರು ಮತಗಟ್ಟೆಗಳಿಗೆ ಬಂದು ಸರತಿಯಲ್ಲಿ ನಿಂತು ಮತದಾನ ಮಾಡಿದರು. ನಿತ್ಯ ಬಿಸಿಲಿನ ತಾಪದಿಂದ ಬಳಲಿದ ಜನರಿಗೆ ಮತದಾನದ ದಿನದಂದು ಮೋಡಗಟ್ಟಿದ ವಾತಾವರಣ ಹಿತ ತಂದಿತು.

ಇದು ಮತದಾನ ಹುಮ್ಮಸ್ಸು ಇಮ್ಮಡಿಗೊಳಿಸಿತ್ತು. ಆದರೂ ಬೆಳಿಗ್ಗೆ 11ಗಂಟೆವರೆಗೆ ಮತದಾನ ಮಂದಗತಿಯಿಂದ ಸಾಗಿತು. ಕೆಲವು ಮತಗಟ್ಟೆಗಳು ಮತದಾರರು ಬಾರದೆ ಭಣಗುಟ್ಟವು. ಮಧ್ಯಾಹ್ನ 12ರಿಂದ 5ಗಂಟೆವರೆಗೆ ತುರಿಸಿನ ಮತದಾನ ನಡೆಯಿತು. ಪ್ರತಿಯೊಂದು ಮತಗಟ್ಟೆಯಲ್ಲಿ ಮಹಿಳೆಯರು ಮತ್ತು ಪುರುಷರ ಸಾಲು ಪ್ರತ್ಯೇಕವಾಗಿತ್ತು.

ಬೆಂಬಲಿಗರು ಮತಗಟ್ಟೆಗೆ ಬರುತ್ತಿದ್ದ ಮತದಾರರಿಗೆ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಹೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಗಮನ ಸೆಳೆದ ಪಿಂಕ್ ಮತಗಟ್ಟೆ: ತಾಲ್ಲೂಕಿನ ತಡಸ ಸರ್ಕಾರಿ ಪ್ರಾಥಮಿಕ ಶಾಲೆ, ಬಂಕಾಪುರ ಉರ್ದು ಪ್ರಾಥಮಿಕ ಶಾಲೆ ಹಾಗೂ ಶಿಗ್ಗಾವಿ ಪುರಸಭೆ ಆವರಣದಲ್ಲಿ ಪಿಂಕ್‌ ಮತಗಟ್ಟೆಗಳನ್ನು ತೆರೆಯಲಾಗಿತ್ತು. ಅದರಲ್ಲಿ ಮಹಿಳಾ ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸಿದರು. ಸ್ವಾಗತ ಕೋರುವುದು, ಎ.ಸಿ ವ್ಯವಸ್ಥೆ, ಪ್ರತ್ಯೇಕ ಶೌಚಾಲಗಳು, ಮಕ್ಕಳಿಗೆ ಆಟದ ಸಾಮಗ್ರಗಳನ್ನು ಇಡುವ ಮೂಲಕ ಮತದಾರರಿಗೆ ವಿಶೇಷ ಎನಿಸಿತು.

ಮತದಾನ ವಿಳಂಬ: ಬಂಕಾಪುರ ಸರ್ಕಾರಿ ಆಸ್ಪತ್ರೆ ಹತ್ತಿರದ ಮತಗಟ್ಟೆ, ದುಂಡಸಿ ತಾಂಡಾ ಹಾಗೂ ಬೆಳಗಲಿ ಗ್ರಾಮದಲ್ಲಿನ ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಸುಮಾರು 15 ನಿಮಿಷ ಮತದಾನ ವಿಳಂಬವಾಯಿತು. ಸಂಜೆ ಬಂಕಾಪುರ, ಶಿಗ್ಗಾವಿಯ ಕೆಲ ಭಾಗಗಳಲ್ಲಿ ಮಳೆ ಸುರಿದಿದ್ದರಿಂದ, ಮತಗಟ್ಟೆಗೆ ಬರುವವರು ಕಿರಿಕಿರಿ ಅನುಭವಿಸಿದರು.

ಕೈ ಕೊಟ್ಟ ಯಂತ್ರ

ಅಕ್ಕಿಆಲೂರ: ಪಟ್ಟಣ ಸೇರಿದಂತೆ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯಿಉತ. ಕೆಲವೆಡೆ ಮತಯಂತ್ರಗಳಲ್ಲಿ ದೋಷ ಕಂಡುಬಂದಿತಾದರೂ, ಕೂಡಲೇ ಅಧಿಕಾರಿಗಳು ಸರಿಪಡಿಸಿ ಮತದಾನಕ್ಕೆ ಅನುಕೂಲ ಮಾಡಿಕೊಟ್ಟರು.

ಮಾವಕೊಪ್ಪ, ಹಿರೇಹುಲ್ಲಾಳ, ಕಲ್ಲಾಪುರ ಮತ್ತು ಆಡೂರು ಗ್ರಾಮಗಳಲ್ಲಿ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಮತದಾನ ವಿಳಂಬವಾಯಿತು. ಇದರಿಂದಾಗಿ ಮತದಾರರು ಕಾಯಬೇಕಾಯಿತು. ಕಲ್ಲಾಪುರದಲ್ಲಿ ಸ್ಥಾಪಿಸಲಾಗಿದ್ದ ಸಖಿ ಪಿಂಕ್ ಮತಗಟ್ಟೆ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿನ ಮಾದರಿ ಮತಗಟ್ಟೆಯಲ್ಲಿ ಮತದಾರರು ಹಕ್ಕು ಚಲಾಯಿಸಿ ಸಂಭ್ರಮಿಸಿದರು.

ಅಡ್ಡಿಯಾದ ಮಳೆ

ಸವಣೂರ: ತಾಲ್ಲೂಕಿನಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು. ತಾಲ್ಲೂಕಿನ 33 ಗ್ರಾಮಗಳಲ್ಲಿನ 80 ಮತಗಟ್ಟೆಗಳಲ್ಲಿ  ಬೆಳಿಗ್ಗೆ 7 ಘಂಟೆಯಿಂದಲೇ ಪ್ರಾರಂಭಗೊಂಡ ಮತದಾನ ಪ್ರಕ್ರಿಯೆಗೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ, ಸಂಜೆ ಮಳೆ ಆರಂಭವಾದ್ದರಿಂದ, ಮತಗಟ್ಟೆಗಳತ್ತ ಬರುವ ಜನರು ತೊಂದರೆ ಅನುಭವಿಸಬೇಕಾಯಿತು.

ಎಲ್ಲಿಯೂ ಅಹಿತಕರ ಘಟನೆಗಳು ನಡೆದ ವರದಿಯಾಗಿಲ್ಲ. ಮತಗಟ್ಟೆಗಳಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು.

ಸವಣೂರ ಪಟ್ಟಣದ ಅಂಬೇಡ್ಕರ ನಗರದ ಮತಗಟ್ಟೆ ನಂ. 141, ತೆಗ್ಗಿಹಳ್ಳಿ ಗ್ರಾಮದ ನಂ.153, ಹೊಸನೀರಲಗಿ ಗ್ರಾಮದ ನಂ. 154, ತೊಂಡೂರ ಗ್ರಾಮದ ನಂ. 205 ಮತಗಟ್ಟೆಗಳಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರಿಂದ, ಬೆಳಿಗ್ಗೆ ಒಂದು ತಡವಾಗಿ ಮತದಾನ ಆರಂಭವಾಯಿತು. ಪಟ್ಟಣದ ಉಪ ವಿಭಾಗಾಧಿಕಾರಿ ಆವಣರದಲ್ಲಿ ಸ್ಥಾಪಿಸಿದ್ದ ಸಖಿ ಪಿಂಕ್ ಮತಗಟ್ಟೆ ಗಮನ ಸೆಳೆಯಿತು.

ಕಾರ್ಯಕರ್ತರ ಮಾತಿನ ಚಕಮಕಿ

ಗುತ್ತಲ: ಹಾವನೂರ ಗ್ರಾಮವನ್ನು ಹೊರತುಪಡಿಸಿ ಪಟ್ಟಣ ಸೇರಿದಂತೆ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಹಾವನೂರ ಗ್ರಾಮದಲ್ಲಿ ಮಧ್ಯಾಹ್ನ 12ರ ಸುಮಾರಿಗೆ ಹನಮಂತಗೌಡನ ವೃತ್ತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಆಗ ಎರಡು ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರನ್ನು ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT